ಮಿಲಿಟರಿ ಕ್ಯಾಂಪ್ ಬಳಿ ಅಡ್ಡಾಡಿದ ಅಪರೂಪ ಅತಿಥಿ: ರಕ್ಷಿಸಿದ ಕೊಡಗಿನ ಯೋಧ!

ಹೊಸದಿಗಂತ ವರದಿ,ಮಡಿಕೇರಿ:

ಮಿಲಿಟರಿ ಕ್ಯಾಂಪ್ ಬಳಿ ಅಡ್ಡಾಡುತ್ತಿದ್ದ ಅಪರೂಪದ ಅತಿಥಿಯೊಬ್ಬನನ್ನು ಕೊಡಗಿನ ಯೋಧರೊಬ್ಬರು ರಕ್ಷಿಸಿ ಅರಣ್ಯಕ್ಕೆ ಬಿಟ್ಟು ಬಂದ ಘಟನೆ ನಡೆದಿದೆ!
ಅದೂ ನಡೆದಿರುವುದು ಸದಾ ಸುದ್ದಿಯಲ್ಲಿರುವ ಜಮ್ಮುವಿನಲ್ಲಿ.
ದೇಶದ ಗಡಿ ಕಾಯುವ ಭಾರತೀಯ ಯೋಧರಿಗೆ ವಿರಮಿಸಲು ಕ್ಯಾಂಪಿನ ವ್ಯವಸ್ಥೆ ಇರುತ್ತದೆ. ಅದೇ ರೀತಿ ಕೊಡಗಿನ ಬೆಟ್ಟತ್ತೂರು ಗ್ರಾಮದ ಯೋಧ, ಕೊಂಪುಳಿರ ಪುನೀತ್ ಅವರು ನೆಲೆಸಿದ್ದ ಜಮ್ಮುವಿನ ಅಖ್ನೂರ್ ಪ್ರದೇಶದ ಕ್ಯಾಂಪ್ ಬಳಿ ಅಪರೂಪದ ಅತಿಥಿ ಅಡ್ಡಾಡುವುದನ್ನು ಅಲ್ಲೇ ಇದ್ದ‌ ಸಾಕು ನಾಯಿ ಗಮನಿಸಿದೆ.
ನಾಯಿಯ ವರ್ತನೆಯನ್ನು ಗಮನಿಸಿದ ಪುನೀತ್ ಅವರು ಹೊರಬಂದು ನೋಡಿದಾಗ ಅಲ್ಲಿದ್ದುದು ಚಿಪ್ಪು ಹಂದಿ!
ಇಂಡಿಯನ್ ಪೆಂಗೋಲಿಯನ್ ಎಂದು ಕರೆಸಿಕೊಳ್ಳುವ ಅಪರೂಪದ ಈ ಜೀವಿ ನಿರುಪದ್ರವ ಜೀವಿ. ಅಪಾಯ ಬಂದಾಗ ತಾನೇ ಸುರಳಿ ಸುತ್ತಿಕೊಂಡು ತನ್ನ ಚಿಪ್ಪಿನೊಳಗೆ ಸೇರಿ ರಕ್ಷಿಸಿಕೊಳ್ಳುತ್ತದೆ.
ಸುಮಾರು 10-12 ಕೆಜಿ ತೂಕದ ಆ ಜೀವಿಯನ್ನು ಕಂಡ ಪುನೀತ್ ಅವರು ಅದನ್ನು ರಕ್ಷಿಸಿ, ಅಲ್ಲಿನ ಇತರ ಯೋಧರಿಗೂ ಪರಿಚಯಿಸಿ ಅಚ್ಚರಿ ಮೂಡಿಸಿದ್ದಾರೆ. ಬಳಿಕ ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಆ ಮೂಲಕ ಪುನೀತ್ ತನ್ನ ವನ್ಯಜೀವಿ ಪ್ರೇಮವನ್ನು ಮೆರೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!