ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರ ಅನುಕೂಲಕ್ಕಾಗಿ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲಾಗಿದ್ದು, ಈ ವೇಳೆ ಮಾರ್ಗಸೂಚಿ ಪಾಲಿಸದೆ ಮೈಮರೆತು ಪರಿಸ್ಥಿತಿ ಹೆಚ್ಚು ಕಡಿಮೆ ಆದರೆ ಲಾಕ್ಡೌನ್ ಕೂಡ ಜಾರಿ
ಮಾಡುವ ನಿರ್ಧಾರಕ್ಕೆ ಸರ್ಕಾರ ಮುಂದಾಗಲಿದೆ ಎಂದುಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಜನರ ಹೊಣೆಗಾರಿಕೆ ಹೆಚ್ಚಾಗಿದೆ.
ಜನರು ಕೋವಿಡ್ ಮಾರ್ಗಸೂಚಿ ಪಾಲಿಸಿ ಸಹಕಾರ ನೀಡಬೇಕು. ನಮ್ಮ ಪ್ರಾಣ, ನಮ್ಮ ಆರೋಗ್ಯ, ನಮ್ಮ ಕೈಯಲ್ಲಿದೆ ಎನ್ನುವ ಜವಾಬ್ದಾರಿಯಿಂದ ಸಹಕರಿಸಬೇಕು. ಹೇಗೆ ಬೇಕೋ ಹಾಗೆ ಜನತೆ ವರ್ತಿಸದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಲಾಕ್ಡೌನ್ ಮಾಡುವ ಸಾಧ್ಯತೆ ಕೂಡ ಇದೆ ಎಂದು ಎಚ್ಚರಿಕೆ ನೀಡಿದರು.
ವೀಕೆಂಡ್ ಕರ್ಫ್ಯೂನಿಂದ ಬೀದಿ ಬದಿ ವ್ಯಾಪಾರಿಗಳು, ಆಟೋ, ಹೂವಿನ ವ್ಯಾಪಾರಿಗಳು, ಸಾಮಾನ್ಯ ಬಡವರಿಗೆ ತೊಂದರೆ ಉಂಟಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ತೆಗೆದು ಹಾಕಲಾಗಿದೆ.
ಹಾಗಾಗಿ ವೀಕೆಂಡ್ ಕರ್ಫ್ಯೂ ಒಂದು ಹೊಣೆಗಾರಿಕೆಯನ್ನಾಗಿ, ಮಾನಸಿಕವಾಗಿ ಜನರು ಸ್ವೀಕಾರ ಮಾಡಿದ್ದಾರೆ. ಆ ಮಾರ್ಗಸೂಚಿ ಪಾಲನೆ ಮಾಡುತ್ತಾರೆ ಎನ್ನುವ ಮನಸ್ಥಿತಿಯಲ್ಲಿಯೇ ನಾವು ಈ ನಿರ್ಧಾರ ಕೈಗೊಂಡಿದ್ದು, ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.