ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕೇಂದ್ರ ಸರ್ಕಾರದ ಆದೇಶ ಪಾಲಿಸಲು ಟ್ವಿಟರ್ ನಿರಾಕರಿಸಿದೆ. ಇದೀಗ ಕೇಂದ್ರದ ವಿರುದ್ಧ ಟ್ವಿಟರ್ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಮೂಲಕ ಟ್ವಿಟರ್ ಕೇಂದ್ರದ ವಿರುದ್ಧ ಕಾನೂನು ಸಮರ ಸಾರಿದೆ.
ಆಕ್ಷೇಪಾರ್ಹ ಪೋಸ್ಟ್ ಹಾಗೂ ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್ಗೆ ಈಗಾಗಲೇ ಎರಡು ಬಾರಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿದೆ. ಆದರೆ ಆಕ್ಷೇಪಾರ್ಹ ಪೋಸ್ಟ್ ಹಾಗೂ ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್ ಮೀನಾಮೇಶ ಎಣಿಸಿತ್ತು. ಇದೀಗ ಅಂತಿಮ ಗಡುವು ಸನಿಹ ಬಂದಂತೆ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ನೂತನ ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲ ಪೋಸ್ಟ್ ಹಾಗೂ ಖಾತೆಗಳನ್ನು ತೆಗೆದುಹಾಕಲು ಸೂಚಿಸಿತ್ತು. ಪ್ರಮುಖವಾಗಿ ಪ್ರತ್ಯೇಕ ಸಿಖ್ ರಾಷ್ಟ್ರ ಬೆಂಬಲಿಸಿದ ಪೋಸ್ಟ್ ಹಾಗೂ ಹಲವು ಟ್ವಿಟರ್ ಖಾತೆಗಳು, ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ವಿರುದ್ಧ ತಪ್ಪು ಮಾಹಿತಿಗಳ ಪೋಸ್ಟ್, ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆ ವಿರುದ್ಧದ ಪೋಸ್ಟ್ಗಳನ್ನು ತೆಗೆದು ಹಾಕಲು ಸೂಚಿಸಿತ್ತು. ಆದರೆ ಈ ಎಚ್ಚರಿಕೆ ಕುರಿತು ಮೌನ ವಹಿಸಿದ್ದ ಟ್ವಿಟರ್ ಇದೀಗ ನ್ಯಾಯಾಂಗದ ಮೊರೆ ಹೋಗಿದೆ.
ಟ್ವಿಟರ್ ಖಾತೆದಾರರಿಗೆ ನೋಟಿಸ್ ನೀಡದೆ ಖಾತೆ ನಿರ್ಬಂಧಿಸಲು ಸಾಧ್ಯವಿಲ್ಲ. ಇನ್ನು ಕೆಲ ಪಕ್ಷಗಳ ಪೋಸ್ಟ್ಗಳನ್ನು ನಿರ್ಬಂಧಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಟ್ವೀಟರ್ ಹೈಕೋರ್ಟ್ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.
ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು:
ಸಾಮಾಜಿಕ ಮಾಧ್ಯಮವನ್ನು ಉತ್ತರದಾಯಿಯನ್ನಾಗಿ ಮಾಡಬೇಕಾದ ಪರಿಸರ ವ್ಯವಸ್ಥೆ ಅಥವಾ ಆಲೋಚನಾ ಪ್ರಕ್ರಿಯೆಯು ನಮ್ಮ ದೇಶದಲ್ಲಿ ಮತ್ತು ಜಾಗತಿಕವಾಗಿ ಹರಡುತ್ತಿದೆ.
ಅದನ್ನ ಹೇಗೆ ಹೊಣೆಗಾರರನ್ನಾಗಿ ಮಾಡುವುದು ಎಂಬುದರ ಬಗ್ಗೆ ತ್ವರಿತ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮ ಉತ್ತರದಾಯಿತ್ವವು ಜಾಗತಿಕವಾಗಿ ಮಾನ್ಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಅದನ್ನ ಜವಾಬ್ದಾರರನ್ನಾಗಿ ಮಾಡುವುದು ಮುಖ್ಯ, ಇದು ಮೊದಲು ಸ್ವಯಂ-ನಿಯಂತ್ರಣದೊಂದಿಗೆ ಪ್ರಾರಂಭವಾಗುತ್ತದೆ, ನಂತರ ಕೈಗಾರಿಕಾ ನಿಯಂತ್ರಣ, ನಂತರ ಸರ್ಕಾರದ ನಿಯಂತ್ರಣ ಎಂದು ಹೇಳಿದರು.ವಿಷಯ ಉತ್ಪಾದಕರು ಸಹ ಸಾಮಾಜಿಕ ಮಾಧ್ಯಮಗಳಿಂದ ಪ್ರಯೋಜನಗಳನ್ನ ಪಡೆಯಬೇಕು, ಈ ಪ್ಲಾಟ್ಫಾರ್ಮ್ಗಳು ಸಹ ಅವುಗಳಿಂದ ಪ್ರಯೋಜನ ಪಡೆಯುತ್ತಿವೆ ಎಂದು ಹೇಳಿದರು.