ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ರಾಜ್ಯಗಳ ಎಲ್ಲಾ ಪ್ರಾದೇಶಿಕ ಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಪಕ್ಷಗಳಾಗಿದ್ದು, ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಇಂದು ತೆಲಂಗಾಣದ ಮೇದಕ್ ಜಿಲ್ಲೆಯ ಚುಟ್ಕೂರಿನಿಂದ ಭಾರತ್ ಜೋಡೋ ಯಾತ್ರೆ ಮುಂದುವರೆದಿದೆ. ಈ ಸಂದರ್ಭದಲ್ಲಿ ಜೈರಾಮ್ ರಮೇಶ್ ಮಾತನಾಡಿ, ಈ ಯಾತ್ರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅಧಿಕಾರದಿಂದ ಕೆಳಗಿಳಿಯಲು ಕ್ಷಣಗಣನೆಯಂತಿದೆ ಎಂದರು.
ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಕೆಸಿಆರ್ ಸರ್ಕಾರವನ್ನು ಡಬಲ್ ಇಂಜಿನ್ ಸರ್ಕಾರ ಎಂದು ಬಣ್ಣಿಸಿದರು. ಹಾಗಾಗಿ ಈ ರೈಲು ತಪ್ಪು ದಾರಿಯಲ್ಲಿ ತೆರಳುತ್ತಿದ್ದು, ರೈಲನ್ನು ಸರಿಯಾದ ಮಾರ್ಗದಲ್ಲಿ ತರುವುದು ಕೂಡ ಭಾರತ್ ಜೋಡೋ ಯಾತ್ರೆಯ ಉದ್ದೇಶಗಳಲ್ಲಿ ಒಂದಾಗಿದೆ. ಪ್ರಾದೇಶಿಕ ಪಕ್ಷಗಳಾದ ವೈಎಸ್ಆರ್ಸಿಪಿ, ಟಿಡಿಪಿ ಮತ್ತು ಟಿಆರ್ಎಸ್ ಮ್ಯಾಚ್ ಫಿಕ್ಸಿಂಗ್ ಪಕ್ಷಗಳಾಗಿವೆ. ಬಿಜೆಪಿಯೊಂದಿಗೆ ಆಯಾ ಪಕ್ಷಗಳು ಉತ್ತಮ ಸಂಬಂಧವನ್ನು ಹೊಂದಿವೆ ಎಂದು ಆರೋಪಿಸಿದರು.
ಆಯಾ ಪ್ರಾದೇಶಿಕ ಪಕ್ಷಗಳು ಇಡಿ, ಆದಾಯ ತೆರಿಗೆ ಮತ್ತು ಸಿಬಿಐಗೆ ಹೆದರುತ್ತಿವೆ. ಬಿಜೆಪಿ ವಿರುದ್ಧ ಯಾವುದೇ ಪಕ್ಷ ಹೋರಾಟ ಮಾಡುತ್ತಿದೆ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಎಐಎಂಐಎಂ ಕೂಡ ಮ್ಯಾಚ್ ಫಿಕ್ಸಿಂಗ್ ಪಕ್ಷವಾಗಿದೆ ಎಂದರು.