ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮರನಾಥ ಯಾತ್ರೆಗೆ ತೆರಳಲು ಬಯಸುವ ಭಕ್ತರಿಗೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ. ಕೋವಿಡ್ -19 ಸಾಂಕ್ರಾಮಿಕ ಕಾಯಿಲೆಯಿಂದ ಎರಡು ವರ್ಷಗಳ ಬಳಿಕ ಯಾತ್ರೆಗೆ ಅನುಮತಿ ನೀಡಿದೆ. ಈ ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಗಿ ಆಗಸ್ಟ್ 11ಕ್ಕೆ ಕೊನೆಗೊಳ್ಳುತ್ತದೆ.
ಸೋಮವಾರದಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು, 13-75 ವರ್ಷ ವಯಸ್ಸಿನವರು ಮಾತ್ರ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಯಾತ್ರಾರ್ಥಿಗಳು ಶ್ರೈನ್ ಬೋರ್ಡ್ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅಮರನಾಥ ಶ್ರೈನ್ ಬೋರ್ಡ್ ಸಿಇಒ ನಿತೀಶ್ವರ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ರೂ. ಇದ್ದ 100 ಶುಲ್ಕ ಈಗ ರೂ. 120ಕ್ಕೆ ನಿಗದಿಪಡಿಸಲಾಗಿದೆ ಎಂದು ಜಮ್ಮುವಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಉತೇಂದರ್ ಕುಮಾರ್ ತಿಳಿಸಿದ್ದಾರೆ. ಯಾತ್ರಾರ್ಥಿಗಳು ಅಮರನಾಥ ದೇಗುಲ ಮಂಡಳಿಯ ಹತ್ತಿರದ ಗೊತ್ತುಪಡಿಸಿದ ಆಸ್ಪತ್ರೆಗಳಿಂದ ಆರೋಗ್ಯ ಪ್ರಮಾಣೀಕರಣವನ್ನು ಪಡೆಯಬೇಕು ಎಂದು ಯತೇಂದರ್ ಕುಮಾರ್ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ 3,000 ಯಾತ್ರಾರ್ಥಿಗಳಿಗೆ ವಸತಿ ಕಲ್ಪಿಸಲು ಯಾತ್ರಿ ನಿವಾಸವನ್ನು ಸ್ಥಾಪಿಸಲಾಗಿದೆ. ಈ ವರ್ಷ ಸರಾಸರಿ ಮೂರು ಲಕ್ಷ ಯಾತ್ರಾರ್ಥಿಗಳು ದೇಗುಲಕ್ಕೆ ಭೇಟಿ ನೀಡುತ್ತಾರೆ ಎಂದು ಮಂಡಳಿ ಅಂದಾಜಿಸಿದೆ.