ಹೊಸದಿಗಂತ ವರದಿ ಹುಬ್ಬಳ್ಳಿ:
ಇಡೀ ದೇಶದ ಗಮನ ಸೆಳೆದಿರುವ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಧರ್ಮ ಯುದ್ಧ ನಡೆಯುತ್ತಿದೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಹೇಳಿದರು.
ಬುಧವಾರ ಗಾಲ್ ಮೈದಾನದಲ್ಲಿ ವಾಯುವಿಹಾರಿಗಳನ್ನು ಭೇಟಿ ಮಾಡಿ ಮತಯಾಚಿಸಿದ ನಂತರ ಕುಸುಗಲ್ ರಸ್ತೆ ಬೆಳವಣಕಿ ನಗರದ ಲಿವಿಂಗ್ ಲೈಟ್ಸ್ ಅಪಾರ್ಟ್ಮೆಂಟ್ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ 30 ವರ್ಷಗಳಿಂದ ಶಾಸಕರಾಗಿದ್ದವರು, ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿ ಸ್ಪರ್ಧೆಗಿಳಿದಿದ್ದಾರೆ. ಹಾಗಾಗಿ ಈ ಚುನಾಣೆಯಲ್ಲಿ ಅವರನ್ನು ಸೋಲಿಸಿ ಧರ್ಮ ವಿಜಯ ಸ್ಥಾಪಿಸಬೇಕು ಎಂದರು.
ಜಗದೀಶ್ ಶೆಟ್ಟರ್ ಈ ಮೊದಲು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್ ಮುಳುಗುವ ಹಡಗು, ಐಸಿಯುನಲ್ಲಿದೆ ಎಂದು ಟೀಕಿಸುತ್ತಿದ್ದರು. ಈಗ ಅವರೇ ಐಸಿಯುನಲ್ಲಿದ್ದಾರೆ. ಪಪ್ಪುನನ್ನು ಟೀಕಿಸುತ್ತಿದ್ದ ಶೆಟ್ಟರ್ ಈಗ ತಾವೂ ಪಪ್ಪು ರೀತಿ ವರ್ತಿಸುತ್ತಿರುವುದು ದುರಂತ ಎಂದು ಟೀಕಿಸಿದರು.
ಸಭೆಯನ್ನು ಆಯೋಜಿಸಿದ್ದ ವಿನೋದ ಪಟವಾ ಸ್ವಾಗತಿಸಿದರು. ಕಿಶೋರ ಮೆಹರವಾಡೆ, ಜಯಂತಿಲಾಲ್, ಪವನಜಿ, ಅಮಿತ್, ಪ್ರವೀಣಭಾ, ಕಿರಣ ವಡೇರಾ, ರಾಜು ವಡೇರಾ, ಆಣಮದ ಪಟವಾ, ಶೇಖರ, ಪಟೇಲಜಿ ಉಪಸ್ಥಿತರಿದ್ದರು.