‘ಕಂದಾಯ ದಾಖಲೆ ಮನೆ ಬಾಗಿಲಿಗೆ’ಯೋಜನೆಗೆ ನಾಳೆ ಚಾಲನೆ: ಡಾ.ಬಿ.ಸಿ.ಸತೀಶ್

ಹೊಸದಿಗಂತ ವರದಿ,ಮಡಿಕೇರಿ:

ರಾಜ್ಯ ಸರ್ಕಾರವು ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ , ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ ಮಾ.12 ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿ ತಾಲೂಕಿನ ಮಕ್ಕಂದೂರಿನಲ್ಲಿ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಮಾ. 12 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಮಟ್ಟದಲ್ಲಿ ಚಿಕ್ಕಬಳ್ಳಾಪುರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಚಾಲನೆ ದೊರೆಯಲಿದೆ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಕಂದಾಯ ಸಿಬ್ಬಂದಿಯಾದ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರ್, ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು, ಅಪರ ಜಿಲ್ಲಾಧಿಕಾರಿ ಮತ್ತು ಅಗತ್ಯವಿದ್ದಲ್ಲಿ ಇತರ ಇಲಾಖೆಗಳ ಸಿಬ್ಬಂದಿ/ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿರುವ ಎಲ್ಲಾ ರೈತ ಕುಟುಂಬಗಳಿಗೆ ಕಂದಾಯ ದಾಖಲೆಗಳನ್ನು ಮಾ.12 ರಂದು ತಲುಪಿಸಲು ಕ್ರಮವಹಿಸಲಾಗುತ್ತದೆ.
ಒಂದು ವೇಳೆ ದಾಖಲೆಗಳು ಮುದ್ರಣವಾಗದೆ ರೈತರಿಗೆ ದಾಖಲೆಗಳನ್ನು ಮುದ್ದಾಂ ತಲುಪಿಸಲು ಸಾಧ್ಯವಾಗದೇ ಇದ್ದಲ್ಲಿ ಅಂತಹ ರೈತರಿಗೆ ಮಾ.21 ರಿಂದ 26 ರವರೆಗೆ ಅಟಲ್‍ಜೀ ಜನಸ್ನೇಹಿ ಕೇಂದ್ರದಲ್ಲಿ ಉಚಿತವಾಗಿ ದಾಖಲೆಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಡಾ.ಬಿ.ಸಿ.ಸತೀಶ ಅವರು ವಿವರಿಸಿದರು.
ಪೂರ್ವ ಸಿದ್ದತೆ: ಆರ್‍ಟಿಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಮುದ್ರಣ ಮಾಡಿ ಕುಟುಂಬವಾರು ಮತ್ತು ಗ್ರಾಮವಾರು ವಿಂಗಡಿಸಿ ಪೂರ್ವ ಮುದ್ರಿತ ಪ್ಲಾಸ್ಟಿಕ್ ಫೈಲ್, ಫೋಲ್ಡರ್’ನಲ್ಲಿ ಹಾಕಿ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಹಾಗೂ ಉದ್ಘಾಟನೆ ಮಾಡುವ ಗ್ರಾಮದ ಎಲ್ಲಾ ಫೈಲ್/ ಫೋಲ್ಡರ್’ಗಳನ್ನು ಒಂದು ದಿನ ಮುಂಚಿತವಾಗಿ ಪರಿಶೀಲಿಸಿ, ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಂದಾಯ ದಾಖಲೆಗಳನ್ನು ರೈತರಿಗೆ ತಲುಪಿಸಿರುವುದಕ್ಕೆ ಮುದ್ದಾಂ ವಹಿಯಲ್ಲಿ ಸ್ವೀಕೃತಿ ಪಡೆಯಲಾಗುತ್ತದೆ. ಕಡ್ಡಾಯವಾಗಿ ರೈತರ ದೂರವಾಣಿ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಫ್ರೂಟ್ಸ್ ತಂತ್ರಾಂಶದಲ್ಲಿ ಲಿಂಕ್ ಆಗಿದ್ದಲ್ಲಿ ದಾಖಲೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿಶೇಷ ಅಭಿಯಾನ: ಆರ್‍ಟಿಸಿಯನ್ನು ತೆಗೆದು ಪ್ರತ್ಯೇಕ ಆರ್‍ಟಿಸಿ ಮಾಡಲು ವಿಶೇಷ ಅಭಿಯಾನ ಜಿಲ್ಲೆಯಲ್ಲಿಯೂ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 84,672 ಪೈಕಿ ಆರ್‍ಟಿಸಿಗಳಲ್ಲಿ 9 ಸಾವಿರ ಪೈಕಿ ಆರ್‍ಟಿಸಿ ಕಡಿಮೆಯಾಗಿದೆ ಎಂದರು.
ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆಯಿಂದ ಮಾಡಲಾಗುತ್ತದೆ. ಬೆಳೆ ದರ್ಶಕ ಆ್ಯಪ್’ನ್ನು ಸಹ ನಿರ್ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನುಡಿದರು.
ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್, ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!