ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾ ಜನ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆಯ ಹೊರತಾಗಿಯೂ ದಾಳಿಗಳು ಹೆಚ್ಚಾಗಿವೆ. ಸರ್ಕಾರದ ಬೆಂಬಲಿಗರು ಮತ್ತು ವಿರೋಧಿಗಳ ನಡುವಿನ ಘರ್ಷಣೆಯಿಂದಾಗಿ ಶ್ರೀಲಂಕಾದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಕೊಲಂಬೊದ ಅಧ್ಯಕ್ಷೀಯ ಸಚಿವಾಲಯದ ಮುಂದೆ ಬೃಹತ್ ಧರಣಿ ನಡೆಸಲಾಯಿತು.
ಮಂತ್ರಿಗಳು, ಸಂಸದರ ಮೇಲೆಯೇ ಜನ ದಾಳಿ ನಡೆಸುತ್ತಿದ್ದಾರೆ. ಸೋಮವಾರ ನಡೆದ ದಾಳಿಯಿಂದಾಗಿ ಹಲವರು ಮೃತಪಟ್ಟಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಶ್ರೀಲಂಕಾದ ಮಾಜಿ ಪ್ರಧಾನಿ ರಾಜಪಕ್ಸೆ ಪ್ರತಿಭಟನಾಕಾರರ ಕಣ್ಣಿಗೆ ಕಾಣದೆ ರಹಸ್ಯ ಸ್ಥಳಕ್ಕೆ ಬಚ್ಚಿಟ್ಟುಕೊಂಡಿದ್ದಾರೆ. ತಮ್ಮ ಸ್ವಂತ ಹೆಲಿಕಾಪ್ಟರ್ನಲ್ಲಿ ತೆರಳಿದ ರಾಜಪಕ್ಸೆ ಪ್ರಸ್ತುತ ಟ್ರಿಂಕೋಮಲಿಯ ನೌಕಾನೆಲೆಯಲ್ಲಿ ಆಶ್ರಯ ಪಡೆದಿರುವುದಾಗಿ ವರದಿಯಾಗಿದೆ. ಮಹಿಂದಾ ರಾಜಪಕ್ಸೆ ಜತೆಗೆ ಅವರ ಕುಟುಂಬ ಸದಸ್ಯರೂ ಅಲ್ಲಿ ಅಡಗಿಕೊಂಡಿದ್ದಾರೆ. ಟ್ರಿಂಕೋಮಲಿ ನೌಕಾನೆಲೆಯು ರಾಜಧಾನಿ ಕೊಲಂಬೊದಿಂದ ಸುಮಾರು 270 ಕಿ.ಮೀ ದೂರದಲ್ಲಿದೆ. ಅನುಮಾನಗೊಂಡ ಪ್ರತಿಭಟನಾಕಾರರ ಕಾರುಗಳು ಅಲ್ಲಿ ಸುತ್ತ ಮುತ್ತ ಓಡಾಡುತ್ತಿರುವುದಾಗಿ ಮಾಹಿತಿಯಿದೆ.