ಹೊಸದಿಗಂತ ಡಿಜಿಟಲ್ ಡೆಸ್ಕ್
ಏಪ್ರಿಲ್ 13 ರ ವಾಷಿಂಗ್ಟನ್ 2+2 ಮಾತುಕತೆಯ ನಂತರ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರನ್ನು ಭೇಟಿ ಮಾಡಿ ಉಕ್ರೇನ್ ಸಂಘರ್ಷದಿಂದಾಗಿ ಉಂಟಾಗುತ್ತಿರುವ ಜಾಗತಿಕ ಸಮಸ್ಯೆ ಹಾಗೂ ಅಪಘಾನಿಸ್ಥಾನ ಮತ್ತು ಮ್ಯಾನ್ಮಾರ್ ಗಳಲ್ಲಿ ಉಂಟಾಗಿರುವ ಪರಿಸ್ಥಿತಿಗಳ ಬಗ್ಗೆಚರ್ಚಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್ ತಮ್ಮ ಟ್ವೀಟ್ ನಲ್ಲಿ “ಉಕ್ರೇನ್ ಸಂಘರ್ಷದಿಂದ ಉಂಟಾಗುತ್ತಿರುವ ಜಾಗತಿಕ ಪರಿಣಾಮಗಳು ಅದರಲ್ಲೂ ವಿಶೇಷವಾಗಿ ಆಹಾರ ಮತ್ತು ತೈಲ ಬಿಕ್ಕಟ್ಟಿನಿಂದ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತಾಗಿ ಯು.ಎನ್. ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವುದರ ಜೊತೆಗೆ ಅಪಘಾನಿಸ್ಥಾನ ಮತ್ತು ಮ್ಯಾನ್ಮಾರ್ ಗಳ ನೂತನ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಎನ್ನುವುದರ ಜೊತೆಗೆ ಸಮಕಾಲೀನ ಸಮಸ್ಯೆಗಳನ್ನು ಭಾರತದ ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ಎದುರಿಸಲು ಪ್ರಧಾನ ಕಾರ್ಯದರ್ಶಿ ಆಸಕ್ತಿ ತೋರಿಸಿರುವುದನ್ನು ಶ್ಲಾಘಿಸಿದ್ದಾರೆ.
ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಭಾರತದ ಸಹಭಾಗಿತ್ವದಲ್ಲಿ ಯು.ಎನ್. ಆಸಕ್ತಿತೋರಿರುವುದು ಜಾಗತಿಕವಾಗಿ ಬೆಳೆಯುತ್ತಿರುವ ಭಾರತದ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ಅಮೇರಿಕದೊಂದಿಗಿನ 2+2 ಮಾತುಕತೆಯ ನಂತರ ಜಂಟಿ ಹೇಳಿಕೆ ನೀಡಿ ಅಪಘಾನಿಸ್ಥಾನ ಮತ್ತು ಮ್ಯಾನ್ಮಾರ್ ಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದೆ.
ನಾಲ್ಕನೇ 2+2 ಮಾತುಕತೆಯ ನಂತರ ಅಮೆರಿಕ ಮತ್ತು ಭಾರತ ಜಂಟಿ ಹೇಳಿಕೆಯಲ್ಲಿ ಅಪಘಾನಿಸ್ಥಾನ ಪ್ರದೇಶವನ್ನುಇತರ ದೇಶಗಳಿಗೆ ಬೆದರಿಕೆಹಾಕಲು ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳದಿರುವ ವಿಶ್ವಸಂಸ್ಥೆಯ ನಿಲುವಿಗೆ ಬದ್ಧರಾಗುವಂತೆ ತಾಲಿಬಾನ್ ನಾಯಕತ್ವಕ್ಕೆ ಸೂಚಿಸಿದೆ. ಜೊತೆಗೆ ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತ ಗುಂಪುಗಳ ಸದಸ್ಯರು ಸೇರಿದಂತೆ ಎಲ್ಲಾ ಆಫ್ಘನ್ನರ ಮಾನವ ಹಕ್ಕುಗಳು; ಮತ್ತು ಪ್ರಯಾಣದ ಸ್ವಾತಂತ್ರ್ಯವನ್ನು ಗೌರವಿಸುವಂತೆ ಒತ್ತಾಯ ಮಾಡಿದೆ.
ಹಾಗೂ ಮ್ಯಾನ್ಮಾರ್ನಲ್ಲಿ ಹಿಂಸಾಚಾರವನ್ನು ನಿಲ್ಲಿಸುವುದು, ನಿರಂಕುಶವಾಗಿ ಬಂಧಿತರಾಗಿರುವ ಎಲ್ಲರನ್ನು ಬಿಡುಗಡೆ ಮಾಡಿ ಪ್ರಜಾಪ್ರಭುತ್ವ ಮತ್ತು ಅಂತರ್ಗತ ಆಡಳಿತದ ಹಾದಿಗೆ ಶೀಘ್ರವಾಗಿ ಮರಳಲು ಕರೆ ನೀಡುವ ಮೂಲಕ ʼಏಸಿಯಾನ್ʼ ನ ಐದು ಅಂಶಗಳ ತುರ್ತು ಅನುಷ್ಠಾನಕ್ಕೆ ಕರೆನೀಡಿದೆ.
ಈ ಮೂಲಕ ತನ್ನ ಜಾಗತಿಕ ನಿಲುವನ್ನು ಸ್ಪಷ್ಟವಾಗಿ ಒತ್ತಿ ಹೇಳುತ್ತಿರುವ ಭಾರತದ ವಿದೇಶಾಂಗ ನೀತಿಯು ಭಾರತವನ್ನು ಜಾಗತಿಕ ನಾಯಕರ ಸಾಲಿನಲ್ಲಿ ಅಗ್ರಸ್ಥಾನಕ್ಕೇರಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.