ಹೊಸದಿಗಂತ ವರದಿ, ಸಿಂದಗಿ (ವಿಜಯಪುರ):
ಪಟ್ಟಣದಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ ಸಂಘರ್ಷ ತಾರಕಕ್ಕೇರಿ, ಮಂಗಳವಾರ ನಿರ್ಮಾಣಗೊಂಡ ಬಿಗುವಿನ ವಾತಾವರಣವನ್ನು ಪೊಲೀಸರು ತಿಳಿಗೊಳಿಸಿದರು.
ಪಟ್ಟಣದ ಆರ್ ಡಿ ಪಾಟೀಲ ಕಾಲೇಜಿನಲ್ಲಿ, ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಒಳಗಡೆ ಪ್ರವೇಶ ನೀಡಿದಕ್ಕೆ ಆಡಳಿತ ಮಂಡಳಿ ವಿರುದ್ಧ, ಕೇಸರಿ ಶಾಲು ಧರಿಸಿದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜ್ ಪ್ರವೇಶಕ್ಕೆ ಮುಂದಾದರು.
ಇದರಿಂದ ಕಾಲೇಜಿನ ಆಡಳಿತ ಮಂಡಳಿಯವರು, ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗಡೆ ಕಳಿಸಿದರು.
ಆಗ ಹಿಜಾಬ್ ಧರಿಸಿದ ಶಿಕ್ಷಕಿಯರಿಗೆ ಕಾಲೇಜಿನಿಂದ ಹೊರಗಡೆ ಕಳಿಸದ ಹಿನ್ನೆಲೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ತಿಳಿಯುತ್ತಿದ್ದಂತೆ, ಕೆಲ ಯುವಕರ ದಂಡು ಕಾಲೇಜ್ ಎದುರು ಜಮಾಯಿಸಿದ್ದಕ್ಕೆ, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಸಿಂದಗಿ ಪೋಲಿಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.