ಹೊಸದಿಗಂತ ವರದಿ, ಮಡಿಕೇರಿ:
ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಶನಿವಾರಸಂತೆಯ ತ್ಯಾಗರಾಜ ಕಾಲೋನಿ ಹಾಗೂ ಕೊಡ್ಲಿಪೇಟೆಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸರಬರಾಜು,ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಯೋಗೇಶ್ (25) ಮತ್ತು ದೊಡ್ಡಕೊಡ್ಲಿ ನಿವಾಸಿ ಮೊಹಮ್ಮದ್ ಅಸ್ಗರ್ (40) ಎಂಬವರೇ ಬಂಧನಕ್ಕೊಳಗಾದವರಾಗಿದ್ದು, ಆರೋಪಿಗಳಿಂದ ಒಟ್ಟು 240 ಗ್ರಾಂ. ಗಾಂಜಾ, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ,ಸರಬರಾಜು, ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರೊಬೆಷನರಿ ಎಎಸ್’ಪಿ ಡಾ. ಬೆನಕಪ್ರಸಾದ್.ಎನ್.ಜೆ, ಸೋಮವಾರಪೇಟೆ ಉಪ ವಿಭಾಗ ಡಿವೈಎಸ್ಪಿ ಆರ್.ಎ.ಗಂಗಾಧರಪ್ಪ, ಶನಿವಾರಸಂತೆ ಠಾಣೆಯ ಪಿಎಸ್ಐಗಳಾದ ಗೋವಿಂದರಾಜು, ಹೆಚ್.ವೈ.ಚಂದ್ರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಮಾಹಿತಿ ಸಂಗ್ರಹಿಸಿ, ಏಕಕಾಲದಲ್ಲಿ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯಲ್ಲಿ ಮತ್ತು ಕೊಡ್ಲಿಪೇಟೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.