ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಯಾವ ಪುರುಷಾರ್ಥಕ್ಕೆ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಜನರಿಗೆ ಮತ ಕೇಳುವ ನೈತಿಕತೆಯು ಸಹ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗವನ್ನು ಕೊಡುಗೆಯಾಗಿ ನೀಡಿರುವ ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವುದು ದುರ್ದೈವ. ವಿಜಯ ಸಂಕಲ್ಪದ ಬದಲು ಬಿಜೆಪಿಯವರು ಕ್ಷಮೆ ಯಾತ್ರೆ ನಡೆಸಬೇಕು ಎಂದರು.
ಶೇ.40ರಷ್ಟು ಕಮೀಷನ್ ಪಡೆದಿದ್ದಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಕ್ಕೆ, ಯುವಕರಿಗೆ ಉದ್ಯೋಗ ನೀಡದಿದ್ದಕ್ಕೆ ಬಿಜೆಪಿಯವರು ಕ್ಷಮೆ ಯಾಚಿಸಬೇಕು. ಕಳೆದ 4ವರ್ಷಗಳಲ್ಲಿ ಬಿಜೆಪಿ ಸರ್ಕಾರ ಒಟ್ಟು 23,000 ರೌಡಿ ಶೀಟರ್ ಗಳಿಗೆ ಕ್ಲೀನ್ ಚಿಟ್ ನೀಡಿದೆ. ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರೌಡಿ ಶೀಟರ್ ಫೈಟರ್ ರವಿಗೆ ಕೈ ಮುಗಿದು ನಮಸ್ಕರಿಸಿದ್ದು ದುರ್ದೈವ. ಫೈಟರ್ ರವಿಯನ್ನು ಪ್ರಧಾನಿ ಬಳಿ ಬಿಟ್ಟಿದ್ದು ಯಾರು ಎಂಬುದು ಬಹಿರಂಗವಾಗಬೇಕು ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಮಾ. 20- 21 ರಂದು ಬಿಡುಗಡೆ ಮಾಡುತ್ತೇವೆ. ಮೊದಲ ಪಟ್ಟಿಯಲ್ಲಿ 120-130 ಅಭ್ಯರ್ಥಿಗಳ ಹೆಸರು ಇರಲಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಎಂದು ತಿಳಿಸಿದರು.