ಹೊಸದಿಂಗಂತ ಡಿಜಿಟಲ್ ಡೆಸ್ಕ್
ತನ್ನ ಬೆರಗುಗೊಳಿಸುವ ನೋಟ ಮತ್ತು ಅದ್ಭುತ ನಟನಾ ಕೌಶಲ್ಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಅಭಿನೇತ್ರಿ ಸಮಂತಾ ರುತ್ ಪ್ರಭು. ತೆಲುಗು ಚಿತ್ರ ʼಯೇ ಮಾಯಾ ಚೇಸಾವೆʼ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಸಮಂತಾ ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ.
ಸೌತ್ ಸಿನಿರಂಗದ ಜೊತೆಗೆ ಬಾಲಿವುಡ್ ಗೂ ಕಾಲಿಟ್ಟಿರುವ ಸ್ಯಾಮ್ ಬೇಡಿಕೆ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಟಿ ಸಮಂತಾ ಜೀವನದಲ್ಲಿ ವರ್ಷದ ಹಿಂದೆ ದೊಡ್ಡ ಬಿರುಗಾಳಿಯೊಂದು ಎದ್ದಿತ್ತು. 2017 ರಲ್ಲಿ ನಟ ನಾಗಚೈತನ್ಯರನ್ನು ಪ್ರೀತಿಸಿ ವಿವಾಹವಾಗಿದ್ದ ಸಮಂತಾ 2021 ರಲ್ಲಿ ತಾವಿಬ್ಬರು ಬೇರಾಗುತ್ತಿರುವುದಾಗಿ ಘೋಷಿಸಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದರು. ಅಂದಿನಿಂದ ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾಗಲಿ, ಮೊದಲಿನಂತೆ ಸಂತೋಷದಿಂದ ಒಟ್ಟಾಗಿ ಬಾಳಲಿ ಎಂದು ಆಶಿಸುತ್ತಿದ್ದರು. ಇದೀಗ ಅಭಿಮಾನಿಗಳ ಪ್ರಾರ್ಥನೆ ನಿಜವಾಗುವ ಕಾಲ ಬಂದಿದೆ. ಈ ಕುರಿತು ಕೇಳಿಬರುತ್ತಿರುವ ಸುದ್ದಿ ಕೇಳಿ ತಾರಾಜೋಡಿಯ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಸಮಂತಾ ರುತ್ ಪ್ರಭು ಮತ್ತೊಮ್ಮೆ ತಮ್ಮ ಜೀವನದಲ್ಲಿ ಪ್ರೀತಿಯನ್ನು ತೆರೆದ ತೋಳುಗಳಿಂದ ಸ್ವೀಕರಿಸಲು ಸಿದ್ಧರಾಗಿರುವಂತೆ ತೋರುತ್ತಿದೆ. ವರದಿಯ ಪ್ರಕಾರ, ಸಮಂತಾ ಜೀವನದಲ್ಲಿ ಮತ್ತೊಮ್ಮೆ ಪ್ರೀತಿಯನ್ನು ಕಂಡುಕೊಳ್ಳಲು ಆಸಕ್ತಿ ಹೊಂದಿದ್ದಾರೆ ಮತ್ತು ಅವರು ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಅಚ್ಚರಿಯೆಂದರೆ ಸಮಂತಾ ಮತ್ತೊಮ್ಮೆ ಮಾಜಿ ಪತಿ ನಾಗಚೈತನ್ಯರನ್ನು ಕೈಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ನಿರ್ಧಾರದ ಹಿಂದೆ ಸದ್ಗುರು ಜಗದೀಶ್ ವಾಸುದೇವ್ ಅವರ ಪಾತ್ರವಿದೆ. ಸದ್ಗುರು ಪ್ರಿಯ ಶಿಷ್ಯೆಯಾಗಿರುವ ಸಮಂತಾಗೆ ಚೈತನ್ಯರನ್ನು ಮತ್ತೆ ವಿವಾಹವಾಗುವಂತೆ ಸದ್ಗುರು ಹೇಳಿದ್ದಾರೆ ಎನ್ನಲಾಗಿದೆ. ಚೈತನ್ಯರ ಪ್ರೀತಿ ನಟಿಗೆ ಮನವರಿಕೆಯಾಗಿದೆ. ನಾಗ ಚೈತನ್ಯಗೆ ಎರಡನೇ ಅವಕಾಶವನ್ನು ನೀಡುವಂತೆ ಸಮಂತಾ ಅವರನ್ನು ಪ್ರಭಾವಿಸುವಲ್ಲಿ ಸದ್ಗುರು ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಇತ್ತೀಚೆಗೆ ಕಾಫಿ ವಿತ್ ಕರಣ್ 7 ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ತನ್ನ ಮಾಜಿ ಪತಿ ಚೈತನ್ಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ತಮ್ಮಿಬ್ಬರಲ್ಲೂ ಕಠಿಣ ಭಾವನೆಗಳಿವೆ ಎಂದು ಬಹಿರಂಗಪಡಿಸಿದರು. ನಾವಿಬ್ಬರು ಒಂದೇ ಕೋಣೆಯಲ್ಲಿದ್ದರೆ ಪರಸ್ಪರ ಒಬ್ಬರನ್ನೊಬ್ಬರು ನೋಯಿಸದೆ ಇರಲು ಸಾಧ್ಯವಿಲ್ಲದಂತ ಭಾವನೆಗೆ ಹೊಯ್ದಾಟ ತಮ್ಮ ನಡುವೆ ಇದೆ ಎಂದು ಸಮಂತಾ ಹೇಳಿದ್ದರು. ಈಗ ಚೈತನ್ಯ ಜೊತೆಗೆ ಸೌಹಾರ್ದಯುತ ಸಂಬಂಧ ಇಲ್ಲ. ಆದರೆ ಭವಿಷ್ಯದಲ್ಲಿ ಆಗಬಹುದು ಎಂದು ಸಮಂತಾ ಹೇಳಿದ್ದರು. ಅದೇನೇ ಇರಲಿ ಸ್ಯಾಮ್ – ಚೈತನ್ಯ ಮತ್ತೆ ಒಂದಾಗುವ ಸುದ್ದಿಕೇಳಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈ ಸುದ್ದಿಯ ಅಧಿಕೃತತೆಯನ್ನು ಮಾಜಿ ದಂಪತಿ ತಿಳಿಸುವವರೆಗೂ ಕಾದುನೋಡಬೇಕಿದೆ.