ಹೊಸ ದಿಗಂತ ವರದಿ, ಮಂಡ್ಯ :
ನಾಗಮಂಗಲ ತಾಲೂಕಿನ ಎಚ್.ಎನ್. ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರವನ್ನು ಕಡಿಯುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ಆತನಿಂದ ಗಂಧದ ತುಂಡು, ಮಚ್ಚು, ಕೊಡಲಿ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು, ಕೃಷ್ಣಗಿರಿ ಜಿಲ್ಲೆಯ ಮನವರಹಳ್ಳಿ ಗ್ರಾಮದ ತಿಮ್ಮರಾಯಪ್ಪನ ಮಗ ಶಿವಕುಮಾರ (28) ಎಂಬಾತನೇ ಬಂಧಿತ ಆರೋಪಿ.
ಈತ ತಾಲೂಕಿನ ಎಚ್.ಎನ್. ಕಾವಲು ಪ್ರದೇಶದಲ್ಲಿ ಗಂಧದ ಮರಗಳನ್ನು ಕಡಿಯುತ್ತಿದ್ದ ವೇಳೆ ಪ್ರಾದೇಶಿಕ ವಲಯದ ದೇವಲಾಪುರ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಸತೀಶ್, ಉಪವಲಯ ಅರಣ್ಯಾಧಿಕಾರಿ ಕೆ.ಆರ್.ಮಂಜು, ಜಿ.ಎಸ್. ಪ್ರಮೋದ್, ರಕ್ಷಕರಾದ ರಂಗಸ್ವಾಮಿ, ದಿಲೀಪ್, ಅರಣ್ಯ ವೀಕ್ಷಕರಾದ ಪುಟ್ಟಸ್ವಾಮಿ, ಕೃಷ್ಣ ಮರೀಗೌಡ, ಬಸವರಾಜು, ಮುಕುಂದ, ಚಾಲಕ ಮೋಹನ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.