ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲುಷಿತ ಆಹಾರ ನೀಡಿ ವಿದ್ಯಾರ್ಥಿನಿಯರ ಜೀವದ ಜೊತೆ ಸಿಬ್ಬಂದಿ ಚೆಲ್ಲಾಟವಾಡುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ತೆಲಂಗಾಣದ ನಾರಾಯಣಖೇಡ್ನ ಕಸ್ತೂರಬಾ ಬಾಲಕಿಯರ ಶಾಲೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ಬೆಳಗ್ಗೆ ವಿದ್ಯಾರ್ಥಿನಿಯರಿಗೆ ಅವಲಕ್ಕಿ ಉಪಹಾರ ನೀಡಲಾಯಿತು. ಆದರೆ, ಅದನ್ನು ತಿಂದ ವಿದ್ಯಾರ್ಥಿಗಳು ಹೊಟ್ಟೆನೋವು, ವಾಂತಿಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ.
ಸುಮಾರು 25 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ನಾರಾಯಣಖೇಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲ ಬಾಲಕಿಯರು ಬೆಳಗಿನ ಉಪಾಹಾರವಾಗಿ ನೀಡಿದ್ದ ಅವಲಕ್ಕಿಯಲ್ಲಿ ಹುಳುಗಳು ಕಾಣಿಸಿಕೊಂಡಿವೆ ಎಂಬುದಾಗಿ ಹೇಳಿದರು. ನಾರಾಯಣಖೇಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 25 ವಿದ್ಯಾರ್ಥಿನಿಯರ ಪೋಷಕರು ತಮ್ಮ ಮಕ್ಕಳಿಗಾಗಿ ಕಾದು ಕುಳಿತಿದ್ದಾರೆ.
ಕಸ್ತೂರಬಾ ಬಾಲಕಿಯರ ಶಾಲೆಯ ಸಿಬ್ಬಂದಿಯ ವರ್ತನೆಗೆ ಪೋಷಕರು ಕೋಪಗೊಂಡಿದ್ದು, ವಿದ್ಯಾರ್ಥಿನಿಯರಿಗೆ ಹುಳು ಇರುವ ಆಹಾರ ನೀಡಿ ಆಸ್ಪತ್ರೆ ಸೇರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.