ಹೊಸದಿಗಂತ ವರದಿ, ಮಡಿಕೇರಿ:
ಶಾಲಾ ವಾಹನ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಒಬ್ಬರು ಸಾವಿಗೀಡಾಗಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಇಲ್ಲಿಗೆ ಸಮೀಪದ ಕತ್ತಲೆಕಾಡು ಎಂಬಲ್ಲಿ ನಡೆದಿದೆ.
ಮೃತರನ್ನು ಮಕ್ಕಂದೂರು ನಿವಾಸಿ, ಕೂಲಿ ಕಾರ್ಮಿಕ ಲಿತೀಶ್ ಪೂಜಾರಿ(22) ಎಂದು ಗುರುತಿಸಲಾಗಿದ್ದು, ಮೂರನೇ ಮೈಲ್ ನಿವಾಸಿ,ಕೂಲಿ ಕಾರ್ಮಿಕ ಬಿ.ಎನ್.ಕೋಟಿ(60) ಗಂಭೀರವಾಗಿ ಗಾಯಗೊಂಡು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ ಕೂಲಿ ಕೆಲಸಕ್ಕೆಂದು ಇವರಿಬ್ಬರು ಸಿದ್ದಾಪುರಕ್ಕೆ ಬೈಕ್’ನಲ್ಲಿ ತೆರಳುತ್ತಿದ್ದ ಸಂದರ್ಭ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಿಂದ ಮಡಿಕೇರಿಗೆ ಶಾಲಾ ಮಕ್ಕಳನ್ನು ಕರೆತರುತ್ತಿದ್ದ ವ್ಯಾನ್ ಕತ್ತಲೆಕಾಡು ಬಳಿ ಡಿಕ್ಕಿಯಾಗಿತ್ತು.
ಗಾಯಾಳುಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ, ಲಿತೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಕೋಟಿ ಅವರ ಸ್ಥಿತಿಯೂ ಗಂಭೀರವಾಗಿರುವುದಾಗಿ ಹೇಳಲಾಗಿದೆ.