ಹೊಸ ದಿಗಂತ ವರದಿ, ಕಾಸರಗೋಡು:
ಜಿಲ್ಲೆಯ ಉಪ್ಪಳ ಐಲ ಸಮೀಪದ ಹನುಮಾನ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಕಡಲ್ಕೊರೆತ ಆರಂಭಗೊಂಡಿದೆ. ಇದರಿಂದಾಗಿ ಸಮೀಪದ ರಸ್ತೆಯು ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಮಾತ್ರವಲ್ಲದೆ ಅಲೆಯ ಅಬ್ಬರವನ್ನು ತಡೆಯಲು ನಿರ್ಮಿಸಲಾದ ಕಗ್ಗಲ್ಲಿನ ತಡೆಗೋಡೆ ಸಮುದ್ರಕ್ಕೆ ಆಹುತಿಯಾಗುತ್ತಿದೆ.
ಈ ಪರಿಸರದಲ್ಲಿ ಹಲವಾರು ಮನೆಗಳಿದ್ದು , ಇಲ್ಲಿನ ನಿವಾಸಿಗಳು ಆತಂಕದಿಂದಲೇ ಜೀವನ ಸಾಗಿಸುವಂತಾಗಿದೆ. ತೆಂಗಿನ ಮರಗಳು, ಗಾಳಿ ಮರಗಳನ್ನು ಕಡಲಾಕ್ರಮಿಸುವ ಸಾಧ್ಯತೆಯಿದೆ. ಈ ಮಧ್ಯೆ ಐಲ ಹನುಮಾನ್ ನಗರ ಅಲ್ಲದೆ ಶಾರದಾನಗರ, ಶಿವಾಜಿನಗರ, ಮೂಸೋಡಿ ಮೊದಲಾದ ಭಾಗಗಳಲ್ಲೂ ಕಡಲ್ಕೊರೆತ ಸಂಭವಿಸುವ ಆತಂಕ ಎದುರಾಗಿದೆ.
ಕಾಸರಗೋಡು ಜಿಲ್ಲಾಡಳಿತ, ಕಂದಾಯ ಇಲಾಖೆ ಅಧಿಕಾರಿಗಳು ಅಲ್ಲದೆ ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಸ್ಪಂದಿಸಬೇಕಾಗಿದೆ. ಜೊತೆಗೆ ಕಡಲ ಕಿನಾರೆ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಸಬೇಕಾಗಿದೆ.