ಹೊಸದಿಗಂತ ವರದಿ, ಕಲಬುರಗಿ.
ಜಿಲ್ಲೆಯಲ್ಲಿ ಬೀಜ ಪರೀಕ್ಷೆ ಮತ್ತು ಮಣ್ಣು ಪರೀಕ್ಷೆ ಕೇಂದ್ರದ ಅಗತ್ಯವಿದ್ದರೆ ಕೇಂದ್ರ ಸರ್ಕಾರದಲ್ಲಿ ಅವಕಾಶವಿದ್ದು, ರಾಜ್ಯದಿಂದ ಪ್ರಸ್ತಾವನೆ ಕಳುಹಿಸಿಕೊಟ್ಟರೆ ಅನುದಾನ ನೀಡಲಾಗುವುದು ಎಂದು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿಕರ ಜೀವನ ಸುಧಾರಣೆಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ರೈತರಿಗಾಗಿ ಶಿಥಲೀಕರಣ ಘಟಕ, ಉಗ್ರಾಣ, ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಅನುದಾನ ನೀಡಲಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಅಗತ್ಯತೆಯ ಬಗ್ಗೆ ಪ್ರಸ್ತಾವನೆಯನ್ನು ರಾಜ್ಯದ ಮೂಲಕ ಕೇಂದ್ರಕ್ಕೆ ಸಲ್ಲಿಸಿದರೆ ಅನುದಾನ ನೀಡಲಾಗುವುದು. ಈ ಬಗ್ಗೆ ಪರಿಶೀಲಿಸಿ, ಪ್ರಸ್ತಾವನೆ ಕಳುಹಿಸಿ ಎಂದು ಸ್ಥಳದಲ್ಲಿ ಇದ್ದ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಅತಿವೃಷ್ಟಿಯಿಂದ ಬೆಳೆ ಹಾನಿ ಪರಿಹಾರ ಧನವನ್ನು ರಾಜ್ಯ ಪ್ರಕೃತಿ ವಿಕೋಪ ನಿಧಿಯಡಿ ಈಗಾಗಲೇ ನೀಡಲಾಗುತ್ತಿದ್ದು, ಕೇಂದ್ರದ ತಂಡ ಎಲ್ಲೆಡೆ ಪರಿಶೀಲನೆ, ಸಮೀಕ್ಷೆ ನಡೆಸುತ್ತಿದೆ. ಹೆಚ್ಚುವರಿಯಾಗಿ ಕೇಂದ್ರ ಪ್ರಕೃತಿ ವಿಕೋಪ ನಿಧಿಯಡಿಯೂ ಶೀಘ್ರದಲ್ಲಿ ನೀಡಲಾಗುವುದು ಎಂದು ತಿಳಿಸಿದರು. ದೇಶದಲ್ಲಿ ಭತ್ತದ ಇಳುವರಿ ಕಡಿಮೆ ಆಗಿದೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಇನ್ನು ಸ್ಥಿತಿ ಅರಿಯಬೇಕು ಎಂದರು.