ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ಸಮಾಜವಾದಿ, ಗಾಂಧಿವಾದಿ ಹಾಗೂ ಕನ್ನಡ ಚಳವಳಿಯ ಹೋರಾಟಗಾರ ಪ.ಮಲ್ಲೇಶ್ ಅವರು ಹೃದಯಾಘಾತದಿಂದ ಗುರುವಾರ ವಿಧಿವಶರಾಗಿದ್ದಾರೆ.
ಮೈಸೂರಿನ ರಾಮಕೃಷ್ಣನಗರದ ನಿವಾಸಿಯಾದ ಅವರಿಗೆ 89 ವರ್ಷ ವಯಸ್ಸಾಗಿತ್ತು. ಎಂದಿನಂತೆ ತಮ್ಮ ನೃಪತುಂಗ ಕನ್ನಡ ಶಾಲೆಗೆ ಮಧ್ಯಾಹ್ನ ಮಲ್ಲೇಶ್ ಅವರು ಆಗಮಿಸಿ ಶಾಲೆಯ ಚಟುವಟಿಕೆ ನೋಡಿ ಮನೆಗೆ ತೆರಳಿದ್ದರು.
ಆದರೆ, ದಿಢೀರ್ ಅಸ್ವಸ್ಥರಾದ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿದರೂ , ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4 ಗಂಟೆ ವೇಳೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಪ.ಮಲ್ಲೇಶ್ ಕನ್ನಡ ಪರ ಹೋರಾಟಗಾರರಾಗಿದ್ದರು.
ಕಳೆದ ಮೂರು ವರ್ಷದ ಹಿಂದೆ ಇವರ ಪತ್ನಿ ಸರ್ವಮಂಗಳಾ ಕೂಡ ಮೃತಪಟ್ಟಿದ್ದರು. ಪ.ಮಲ್ಲೇಶ್ ಅವರಿಗೆ ಮೂವರು ಪುತ್ರಿಯರು ಹಾಗೂ ಒಬ್ಬ ಮಗ ಇದ್ದಾನೆ. ಇವರ ಅಂತ್ಯಸಂಸ್ಕಾರ ನಾಳೆ ಮೈಸೂರಿನ ರುದ್ರಭೂಮಿಯಲ್ಲಿ ನಡೆಯಲಿದೆ. ಪ. ಮಲ್ಲೇಶ್ ನೇರ ನಡೆ ನುಡಿಯ ಹೋರಾಟಗಾರರಾಗಿದ್ದರು.