BIG NEWS | ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ ಐದು ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ, 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕಾಶ್ಮೀರದ ರಾಂಬನ್‌ನ ಚಂದರ್‌ಕೋಟ್ ಲಂಗರ್ ಪಾಯಿಂಟ್‌ನಲ್ಲಿ ನಡೆದಿದೆ.

ಅಮರನಾಥ ಯಾತ್ರೆಗಾಗಿ ಭಕ್ತರು ಐದು ಬಸ್‌ಗಳ ಮೂಲಕ ಪಹಲ್ಗಾಮ್‌ಗೆ ತೆರಳುತ್ತಿದ್ದರು. ಈ ವೇಳೆ ಲಂಗರ್ ಪಾಯಿಂಟ್‌ನಲ್ಲಿ ನಾಲ್ಕು ಬಸ್‌ಗಳು ನಿಂತಿದ್ದವು. ಇದೇ ಸಂದರ್ಭದಲ್ಲಿ ಯಾತ್ರೆಯ ಬೆಂಗಾವಲು ಪಡೆಯ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ಕಳೆದುಕೊಂಡು ಇನ್ನುಳಿದ ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಡಿಎಚ್ ರಾಂಬನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಯಾರಿಗೂ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಂಬನ್ ಡಿಸಿ ಮೊಹಮ್ಮದ್ ಅಲಿಯಾಸ್ ಖಾನ್, ಡಿಐಜಿ ಡಿಕೆಆರ್ ಶ್ರೀಧರ್ ಪಾಟೀಲ್, ಎಸ್‌ಎಸ್‌ಪಿ ರಾಂಬನ್ ಕುಲ್ಬೀರ್ ಸಿಂಗ್ ಮತ್ತು ಎಡಿಸಿ ವರುಣ್‌ಜೀತ್ ಸಿಂಗ್ ಚರಕ್ ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಚಿಕಿತ್ಸೆ ಬಳಿಕ ಅಮರನಾಥ ಯಾತ್ರೆಗೆ ತೆರಳಲು ಅನುಮತಿಸಲಾಯಿತು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!