ದಿಗಂತ ವರದಿ ಮಡಿಕೇರಿ:
ತಲಕಾವೇರಿ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬ್ರಹ್ಮಕುಂಡಿಕೆಗೆ ಬೆನ್ನು ಹಾಕಿ ಕ್ಯಾಮೆರಾಗಳಿಗೆ ನಮಸ್ಕರಿಸಿರುವುದನ್ನು ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಅಲ್ಪಸಂಖ್ಯಾತ ನಾಯಕ, ಟಿ.ಎಂ.ಶಾಹಿದ್ ಅವರು ಸಮರ್ಥಿಸಿಕೊಂಡಿರುವುದು ಖಂಡನೀಯ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಟೀಕಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಸೂತಕದ ಕಾರಣದಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಕ್ಯಾಮೆರಾ ಕಂಡೊಡನೆ ಮಾತೆ ಕಾವೇರಿಯ ಉಗಮ ಸ್ಥಾನವಾದ ಬ್ರಹ್ಮ ಕುಂಡಿಕೆಯನ್ನೂ ಮರೆತು ಪ್ರಚಾರಕ್ಕಾಗಿ ಕುಂಡಿಕೆಗೆ ಬೆನ್ನು ಹಾಕಿ ಕ್ಯಾಮೆರಾಕ್ಕೆ ಅಡ್ಡ ಬಿದ್ದಿರುವುದರ ಬಗ್ಗೆ ಕಾಂಗ್ರೆಸ್’ನ ಸ್ಥಳೀಯ ನಾಯಕರು ಸಮಜಾಯಿಷಿಕೆ ಕೊಡಲಿ ಎಂದು ಮಹೇಶ್ ಜೈನಿ ಸವಾಲು ಹಾಕಿದ್ದಾರೆ.
ಡಿ.ಕೆ. ಶಿವ ಕುಮಾರ್ ಅವರ ತಪ್ಪನ್ನು ಸಮರ್ಥಿಸಿ ಕೊಳ್ಳಲಾಗದ ಜಿಲ್ಲಾ ಕಾಂಗ್ರೆಸ್ಸಿಗರು ಒಬ್ಬ ಅಲ್ಪಸಂಖ್ಯಾತ ನಾಯಕನ ಬಾಯಿಯಿಂದ ತಲಾ ಕಾವೇರಿ ಕ್ಷೇತ್ರದ ಬಗ್ಗೆ ಹೇಳಿಕೆ ಕೊಡಿಸಿರುವುದು ಕೊಡಗು ಕಾಂಗ್ರೆಸ್’ನ ಸ್ಥಳೀಯ ನಾಯಕರ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಜೈನಿ ವ್ಯಂಗವಾಡಿದ್ದಾರೆ.
ಈ ಸಮಯ ಸಾಧಕ ಕಾಂಗ್ರೆಸ್ ನಾಯಕರ ಈ ವರ್ತನೆ ಕೊಡಗಿಗೆ ಮಾಡಿದ ಅವಮಾನ ಮಾತ್ರವಲ್ಲದೆ,ನಮ್ಮ ಧಾರ್ಮಿಕ ಆಚಾರ-ವಿಚಾರದಲ್ಲಿ ಒಬ್ಬ ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕ ಮೂಗು ತೂರಿಸಿರುವುದಕ್ಕೆ ಸ್ಥಳೀಯ ಲಜ್ಜೆಗೆಟ್ಟ ಕಾಂಗ್ರೆಸ್ಸಿಗರೇ ಕಾರಣ ಎಂದು ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.