ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಶಶಿ ತರೂರ್ ಅವರು ಚುನಾವಣೆಯಿಂದ ಹಿಂದೆ ಸರಿಯುವ ಮಾತನ್ನು ಶನಿವಾರ ತಳ್ಳಿಹಾಕಿದ್ದಾರೆ. ತಾನು ಎಂದಿಗೂ ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಮತ್ತು ʼಇದು ಕೊನೆಯವರೆಗೂ ಸಾಗುವ ಹೋರಾಟʼ ಎಂದು ಅವರು ಪ್ರತಿಪಾದಿಸಿದ್ದಾರೆ.
ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ತರೂರ್, ಇದು ಪಕ್ಷದೊಳಗಿನ ʼಸ್ನೇಹಪರ ಸ್ಪರ್ಧೆʼ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯಲ್ಲಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ. ʼನಾನು ಇಂದು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಕೆಲವು ದೆಹಲಿಯ ಮೂಲಗಳಿಂದ ವದಂತಿಗಳು ಪ್ರಕಟವಾಗುತ್ತಿವೆ. ನಾನು ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನನ್ನ ಜೀವನದುದ್ದಕ್ಕೂ ಎಂದಿಗೂ ಹಿಂದೆಗೆದಿಲ್ಲ, ಮುಂದೆಯೂ ಆಗುವುದಿಲ್ಲʼ ಎಂದು ತಿರುವನಂತಪುರಂನ ಸಂಸದರೂ ಆಗಿರುವ ತರೂರ್ ಎಂದು ಟ್ವಿಟರ್ನ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
Surprised to get calls saying that “sources in Delhi” claim that I have withdrawn! I am on this race till the finish. #ThinkTomorrowThinkTharoor pic.twitter.com/zF3HZ8LtH5
— Shashi Tharoor (@ShashiTharoor) October 8, 2022
ʼಇದೊಂದು ಹೋರಾಟ. ಇದು ಪಕ್ಷದೊಳಗಿನ ಸೌಹಾರ್ದ ಸ್ಪರ್ಧೆ, ಆದರೆ ಇದು ನನ್ನ ಪಾಲಿಗೆ ಅಂತಿಮ ಹೋರಾಟ. ದಯವಿಟ್ಟು ಅಕ್ಟೋಬರ್ 17 ರಂದು ಬಂದು ಮತ ಚಲಾಯಿಸಿ. ನನಗೆ, ‘ನಾಳೆಯ ಬಗ್ಗೆ ಯೋಚಿಸುವಿರಾದರೆ, ತರೂರ್ ಬಗ್ಗೆಯೂ ಯೋಚಿಸಿ’ ಎಂದು ತರೂರ್ ಹೇಳಿದ್ದಾರೆ. ಇಂದು (ಅಕ್ಟೋಬರ್ 8) ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಈ ಹಿನ್ನೆಲೆಯಲ್ಲಿ ತರೂರ್ ಹೇಳಿಕೆ ಹೊರಬಿದ್ದಿದೆ.
ಕಾಂಗ್ರೆಸ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 24 ರಿಂದ 30 ರವರೆಗೆ ಇತ್ತು. ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. 9,000 ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.