ದಿಗಂತ ವರದಿ ಶಿರಸಿ :
ರಾಜ್ಯದ ಅತಿದೊಡ್ಡ ಜಾತ್ರೆಯಾದ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯು ಮಾ.15 ರಿಂದ 23 ವರೆಗೆ ನಡೆಯಲಿದ್ದು, ಶುಕ್ರವಾರ ಜಾತ್ರೆಯ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ ಹಾಗೂ ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ ಇವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಆರ್.ಜಿ.ನಾಯ್ಕ, ಫಾಲ್ಗುಣ ಶುದ್ಧ ಅಷ್ಟಮಿ ಮಾ.15 ರಂದು ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ರಾತ್ರಿ 11.17 ರಿಂದ 11.27 ರೊಳಗೆ ಸಭಾಮಂಟಪದ ರಂಗ ಮಂಟಪದಲ್ಲಿ ನಡೆಯಲಿದೆ. ನಂತರ ರಾಜೋಪಚಾರದಿ ವಿನಿಯೋಗಗಳು ರಾತ್ರಿ 11.27 ರ ನಂತರ ನಡೆಯಲಿದ್ದು, ಮಾ.16 ತ್ರಯೋದಶಿಯಂದು ಬೆಳಿಗ್ಗೆ 7:03ರಿಂದ ರಥೋತ್ಸವ ಆರಂಭವಾಗಿ ಮಧ್ಯಾಹ್ನ 12.45 ರಿಂದ 12.57ರ ಒಳಗೆ ಬಿಡಕಿ ಬೈಲಿನ ಜಾತ್ರಾ ಸ್ಥಳದ ಪೀಠದಲ್ಲಿ ಸ್ಥಾಪನೆ ಆಗಲಿದೆ ಎಂದರು.