ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಸೇನೆಯ ನಡುವೆ ಬಿರುಕು ಮೂಡಿದ್ದು ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣದ ನಡುವೆ ನಿಜವಾದ ಶಿವಸೇನೆ ಯಾರು ಎಂಬುದಕ್ಕಾಗಿ ನಡೆಯುತ್ತಿರುವ ಕಿತ್ತಾಟವು ಪ್ರಸ್ತುತ ಸುಪ್ರಿಂ ಮೆಟ್ಟಿಲೇರಿದೆ. ಪಕ್ಷದ ಚುನಾವಣಾ ಚಿಹ್ನೆ ಇತ್ಯಾದಿಗಳ ಕುರಿತು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ ಆದರೆ ಉದ್ಧವ್ ಠಾಕ್ರೆ ಬಣವು ನಿಜವಾದ ಶಿವಸೇನೆ ಯಾರೆಂಬುದನ್ನು ನಿರ್ಣಯಿಸುವ ಚುನಾವಣಾ ಆಯೋಗದ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಸುಪ್ರಿಂ ಕೋರ್ಟ್ಗೆ ವಿನಂತಿ ಮಾಡಿದೆ.
ಶಾಸಕರ ಅನರ್ಹತೆಯ ಅಂಶವನ್ನು ಮೊದಲು ನಿರ್ಧರಿಸುವವರೆಗೆ ನಿಜವಾದ ಶಿವಸೇನೆ ಯಾರು ಎಂಬುದನ್ನು ಚುನಾವಣಾ ಆಯೋಗವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಉದ್ಧವ್ ಬಣವು ತನ್ನ ಮನವಿಯಲ್ಲಿ ತಿಳಿಸಿದೆ.
ಚುನಾವಣಾ ಆಯೋಗವು ಜುಲೈ 22 ರಂದು ಪ್ರಕ್ರಿಯೆ ಪ್ರಾರಂಭಿಸಿದೆ ಆದರೆ ಪ್ರಸ್ತುತ ಶಾಸಕರ ಅನರ್ಹತೆಯ ಬಗ್ಗೆ ಇನ್ನೂ ತೀರ್ಪು ಬಂದಿಲ್ಲವಾದ್ದರಿಂದ ಈ ಹಂತದಲ್ಲಿ ಚುನಾವಣಾ ಆಯೋಗವು ಈ ವಿಷಯವನ್ನು ಮುಂದುವರಿಸದಂತೆ ನಿರ್ದೇಶನ ನೀಡುವಂತೆ ಬಣ ಕೇಳಿಕೊಂಡಿದೆ.
ಶಿಂಧೆ ಬಣವು ಹೇಗಾದರೂ ಬಹುಮತವನ್ನು ಬಿಂಬಿಸಲು, ಅಕ್ರಮವಾಗಿ ಅಂಕಿಅಂಶಗಳನ್ನು ಸಂಗ್ರಹಿಸಲು ಮತ್ತು ಸಂಸ್ಥೆಯಲ್ಲಿ ಕೃತಕ ಬಹುಮತವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.