ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದಗಾ೯ದಲ್ಲಿನ ಶ್ರೀ ರಾಘವ ಚೈತನ್ಯ ದೇವಸ್ಥಾನದ ಶಿವಲಿಂಗ ಪೂಜೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ನಿಯೋಜನೆ ಮಾಡಲಾಗಿದೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದರು.
ಶನಿವಾರ ಆಳಂದ ತಾಲೂಕಿನ ಚೆಕ್ ಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಗಡೆಯಿಂದ ಬರುವ ಎಲ್ಲಾ ವಾಹನಗಳ ತಪಾಸಣೆ ಕಡ್ಡಾಯವಾಗಿ ಮಾಡಬೇಕು. ಹಾಗೂ ಬೇರೆ ಕಡೆಗಳಿಂದ ಬರುವ ಎಲ್ಲ ಜನರ ಮೇಲೆ ತೀವ್ರ ನಿಗಾ ವಹಿಸಬೇಕು ಎಂದರು.
ಆಳಂದ ಪಟ್ಟಣದಾದ್ಯಂತ ಒಟ್ಟು ಸರಿ ಸುಮಾರು 1400 ಪೋಲಿಸರ ನಿಯೋಜನೆ, 11 ಕೆ.ಎಸ್.ಆರ್.ಪಿ ತುಕಡಿ, ಡಿಆರ್,ಕ್ಯೂ.ಎಂಡ್.ಟಿ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ನ್ಯಾಯಾಲಯದ ಆದೇಶ ಪ್ರಕಾರ ಪೂಜೆಗೆ ಅವಕಾಶ
ಆಳಂದ ಪಟ್ಟಣದ ದಗಾ೯ದಲ್ಲಿನ ಶಿವಲಿಂಗ ಪೂಜೆಗೆ ಹಾಗೂ ದಗಾ೯ದ ಊರುಸ್ಗೆ ಇಲ್ಲಿಯ ವಕ್ಫ್ ಟ್ರಿಬೂನಲ್ ನ್ಯಾಯಾಲಯ ನೀಡಿದ ಆದೇಶದ ಪ್ರಕಾರವೇ ಎರಡು ಸಮುದಾಯಗಳಿಗೆ ಪೂಜೆಗೆ ಅವಕಾಶ ನೀಡಲಾಗುವುದು ಎಂದರು.
ಬೆಳಿಗ್ಗೆ 8 ಗಂಟೆಯಿಂದ 12 ಗಂಟೆವರೆಗೆ ಒಂದು ಸಮುದಾಯಕ್ಕೆ, ಹಾಗೂ ಇನೊಂದು ಸಮುದಾಯಕ್ಕೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪೂಜೆಗೆ ಅವಕಾಶ ಮಾಡಿ ಕೊಡಲಾಡುವುದು.