ಹೊಸದಿಗಂತ ವರದಿ, ಹುಬ್ಬಳ್ಳಿ:
ಇಲ್ಲಿನ ರೈಲ್ವೆ ಮೈದಾನದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅಭಿನಯದ ೧೨೫ ನೇ ಬಹುನಿರೀಕ್ಷಿತ ವೇದ ಸಿನಿಮಾದ ಪ್ರೀ ರಿಲೀಜ್ ಅದ್ಧೂರಿ ಸಮಾರಂಭಕ್ಕೆ ಬುಧವಾರ ವಾಣಿಜ್ಯನಗರಿಯ ನೂರಾರು ಜನರು ಸಾಕ್ಷಿಯಾದರು.
ತಮ್ಮ ನೆಚ್ಚಿನ ನಟ ಶಿವರಾಜಕುಮಾರ ಅವರು ವೇದಿಕೆ ಹತ್ತಿರ ಬರುತ್ತಿದಂತೆ ಹೂವು ಹಾಕಿ ಅಭಿಮಾನಿಗಳು ಸ್ವಾಗತಿಸಿದರು. ಶಿವಣ್ಣ ಪರ ಘೋಷಣೆ ಕೂಗಿ ಖುಷಿಪಟ್ಟರು. ವೇದಿಕೆ ಮೇಲೆ ಹೋಗುತ್ತಲೆ ಶಿವರಾಜಕುಮಾರ ಅವರು ಟಗರು ಸಿನಿಮಾದ ಹಾಡಿಗೆ ನೃತ್ಯ ಮಾಡಿ ಅಭಿಮಾನಿಗಳಿಗೆ ರಂಜಿಸಿದರು.
ಆನಂದ ಸಿನಿಮಾದ ನೀನ್ ಯಾರೋ …. ನಾನ್ ಯಾರೋ …. ಎಂಬ ಹಾಡನ್ನು ಹಾಡಿ ಮತ್ತೆ ಅವರ ಮೊದಲ ಸಿನಿಮಾ ದತ್ತ ಕೊಡ್ಯೊಯ್ದರು. ವೇದ ಸಿನಿಮಾದ ಪುಷ್ಪ ಸಿನಿಮಾದ ಪುಷ್ಪಾ ಪುಷ್ಪಾ ಸಿನಿಮಾ ಗೀತೆ ಹಾಡಿದರು.
ಈ ವೇಳೆ ಮಾತನಾಡಿದ ಶಿವರಾಜಕುಮಾರ, ಹುಬ್ಬಳ್ಳಿಗೆ ಬರುವುದೆಂದರೆ ಒಂದು ರೀತಿ ಸಂಭ್ರಮ. ಇಲ್ಲಿನ ಆರಾಧ್ಯದೈವ ಶ್ರೀ ಸಿದ್ಧಾರೂಢ ಮಠ ಸ್ವಾಮೀಜಿ ಮಠ ನಮಗೆ ಉತ್ತಮ ನಂಟಿದೆ. ನಮ್ಮ ಪ್ರೊಡೆಕ್ಷನ್ ನಲ್ಲಿ ನನ್ನ ೧೨೫ನೇ ಸಿನಿಮಾ ಮೂಡಿ ಬಂದಿದೆ. ಡಿ.೨೩ ರಂದು ಚಿತ್ರ ರಾಜ್ಯದಾದ್ಯಂತ ತೆರೆ ಕಾಣಲಿದೆ. ಎಲ್ಲರೂ ನೋಡಿ ಹಾರೈಸಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ ಅವರು ಮಾಡಿರುವ ಸಮಾಜಸೇವೆಯ ಕಿರುಚಿತ್ರಗಳನ್ನು ಎಲ್.ಸಿ.ಡಿ. ಮೂಲಕ ಪ್ರದರ್ಶಿಸುತ್ತಿದ್ದರೆ, ಪುಟಾಣಿ ಮಕ್ಕಳು ಗೊಂಬೆ ಹೇಳುತೈತೆ…. ಮತ್ತೆ ಹೇಳುತೈತೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಅಭಿಮಾನಿಗಳು ದಿ. ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಹಿಡಿದು ಘೋಷಣೆ ಕೂಗುತ್ತಿರುವುದು ಸಾಮಾನ್ಯವಾಗಿತ್ತು.
ಗೀತಾ ಶಿವರಾಜ ಕುಮಾರ್, ಹುಬ್ಬಳ್ಳಿ ಧಾರವಾಡ ಗ್ರಾಮೀಣ ಘಟಕದ ಅಧ್ಯಕ್ಷ ಅನೀಲಕುಮಾರ ಪಾಟೀಲ, ಆನಂದ ಕಲಾಲ, ಸಂತೋಷ ಶೆಟ್ಟಿ, ಶಿವಾನಂದ ಮುತ್ತಣ್ಣವರ ಇದ್ದರು.