ಹೊಸದಿಗಂತ ವರದಿ, ಚಿತ್ರದುರ್ಗ :
ಬೀದಿನಾಯಿ ಕಚ್ಚಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಬಾಲಕ ಮೃತಪಟ್ಟಿರುವ ಘಟನೆ ಕಳೆದ ಇಲ್ಲಿಗೆ ಸಮೀಪದ ಮೆದೇಹಳ್ಳಿ ಬಳಿಯ ಬಿಳಿಕಲ್ಲು ನಾಯಕರಹಟ್ಟಿ ಗ್ರಾಮದಲ್ಲಿ ನಡೆದಿದೆ. ಯಶವಂತ್ (೮) ನಾಯಿ ದಾಳಿಗೆ ಬಲಿಯಾದ ಬಾಲಕ.
ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಲ್ಲು ನಾಯಕರಹಟ್ಟಿ ಗ್ರಾಮದ ನಿವಾಸಿಗಳಾದ ಕೇಶವ ಮತ್ತು ರೇಖಾ ದಂಪತಿಯ ಪುತ್ರ ಯಶವಂತ್ ಕಳೆದ ಎರಡು ದಿನಗಳ ಹಿಂದೆ ಮನೆಯ ಮುಂಭಾಗದಲ್ಲಿ ಆಟ ಆಡುತ್ತಿದ್ದ. ಈ ಸಂದರ್ಭದಲ್ಲಿ ಬೀದಿ ನಾಯಿಯೊಂದು ಯಶವಂತ್ನ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ನಾಯಿ ಬಾಲಕನ ಕಣ್ಣಿಗೆ ಐದಾರು ಬಾರಿ ಕಚ್ಚಿತ್ತು. ಇದರಿಂದ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಬಾಲಕ ತೀವ್ರ ಅಸ್ವಸ್ಥನಾಗಿದ್ದ.
ಕೂಡಲೇ ಬಾಲಕನ ಪೋಷಕರು ಯಶವಂತ್ನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಾಲಕನ ಕಣ್ಣಿಗೆ ನಾಯಿ ಕಚ್ಚಿರುವುದರಿಂದ ಬಾಲಕನ ಮೆದುಳಿಗೆ ವಿಷ (ನಂಜು) ಏರಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಅದರಂತೆ ಶನಿವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಬಾಲಕ ಯಶವಂತ್ ಮೃತಪಟ್ಟಿದ್ದಾನೆ.
ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.