ಹೊಸದಿಗಂತ ವರದಿ, ಮಡಿಕೇರಿ:
ಸತತವಾಗಿ ನಾಲ್ಕು ಬಾರಿ ಭೂಕಂಪನಕ್ಕೊಳಗಾಗಿರುವ ಚೆಂಬು ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಭೂಕುಸಿತ ಉಂಟಾಗಿದ್ದು, ಮನೆಯೊಂದು ಜಖಂಗೊಂಡಿದೆ.
ಚೆಂಬು ಗ್ರಾಮದ ಪೂಜಾರಿಗದ್ದೆ ಗಿರಿಧರ್ ಎಂಬವರ ಮನೆಯ ಮೇಲೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಭಾರೀ ಶಬ್ಧದೊಂದಿಗೆ ಮಣ್ಣು ಕುಸಿದಿದ್ದು, ಮನೆಯ ಒಂದು ಭಾಗ ಜಖಂಗೊಂಡಿದೆ.
ಭಾರೀ ಮಳೆ:
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಚೆಂಬುವಿನಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 192 ಮಿಮೀ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಭಾರೀ ಮಳೆಯೇ ಭೂ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ.
ಚೆಂಬು ಪೆರಾಜೆ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಭೂಕಂಪನವಾಗಿರುವುದರಿಂದ ಮಳೆ ನೀರು ಭೂಮಿಯೊಳಗೆ ಇಂಗಿ ಭೂಕುಸಿತ ಸಂಭವಿಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯ ಗಡಿಭಾಗದ ಜನರಲ್ಲಿ ಭೂಕಂಪನ ಸಾಕಷ್ಟು ಆತಂಕವನ್ನು ಸೃಷ್ಡಿಸಿದೆ.
ಮತ್ತೆ ಕಂಪನ:
ಚೆಂಬುವಿನಲ್ಲಿ ಶನಿವಾರ ಮಧ್ಯಾಹ್ನ 1.21ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ