SHOCKING NEWS | ಗುಂಡಿ ನಿರ್ಮಾಣ ವೇಳೆ ಮಣ್ಣು ಕುಸಿತ: ಓರ್ವ ಸಾವು, ಇಬ್ಬರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಗಳೂರು ತಾಲೂಕಿನ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಅಳಕೆ ಎಂಬಲ್ಲಿ ಮನೆಯೊಂದಕ್ಕೆ ಶೌಚಾಲಯದ ಗುಂಡಿ ತೋಡುತ್ತಿದ್ದಾಗ ಮಣ್ಣು ಕುಸಿದು ಕೆಲಸಗಾರನೋರ್ವ ಮಣ್ಣಿನಡಿಗೆ ಸಿಲುಕಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ದುರ್ದೈವಿ ಆದಂ(63) ಎಂದು ಗುರುತಿಸಲಾಗಿದೆ. ಅಡ್ಡೂರಿನವರೇ ಆಗಿರುವ ಆದಂ ಅವರೊಂದಿಗೆ ಇಬ್ರಾಹಿಂ, ಇಂತಿಯಾಝ್ ಎಂಬಿಬ್ಬರು ಕಾರ್ಮಿಕರು ಆರೀಫ್ ಎಂಬವರ ಮನೆಯಲ್ಲಿ ಶೌಚ ಗುಂಡಿ ನಿರ್ಮಾಣ ಮಾಡುತ್ತಿದ್ದರು. ಮಧ್ಯಾಹ್ನ 4:30ರ ಸುಮಾರಿಗೆ 8 ಅಡಿ ಆಳದ ಗುಂಡಿಯ ಮೇಲ್ಭಾಗದಲ್ಲಿ ಮಣ್ಣು ಕುಸಿತವಾಗಿ ಕೆಳಗಡೆ ಕೆಲಸ ಮಾಡುತ್ತಿದ್ದವರ ಮೇಲೆ ಬಿದ್ದಿತ್ತು, ಮಣ್ಣಿನಲ್ಲಿ ಸಿಲುಕಿದ್ದ ಮೂವರನ್ನೂ ಸ್ಥಳೀಯರು ತಕ್ಷಣ ಮೇಲಕ್ಕೆತ್ತಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದಂ ಅಷ್ಟರಲ್ಲೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡ ಕಾರ್ಮಿಕರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಆದಂ ವಿವಾಹಿತರಾಗಿದ್ದು, ಅಡ್ಡೂರಿನಲ್ಲಿ ಕೂಲಿಕೆಲಸ ಮಾಡುತ್ತಿದ್ದರು. ಸ್ಥಳಕ್ಕಾಗಮಿಸಿದ ಬಜಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!