ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ನ ಪ್ರಣಾಳಿಕೆ ಬಹಳ ಆಶ್ಚರ್ಯಕರ ಅನ್ನಿಸಿತು ಎಂದು ಬಿಜೆಪಿ ಮುಖಂಡೆ, ನಟಿ ತಾರ ಹೇಳಿದರು.
ಅವರು ಮಂಗಳವಾರ, ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಒಂದೊಂದು ದೇಶದಲ್ಲಿ ಒಂದೊಂದು ಧರ್ಮಕ್ಕೆ ಮಾನ್ಯತೆ ಇದೆ. ಹಿಂದುಗಳಿಗೆ ಹಿಂದುಸ್ತಾನ ಒಂದೇ ದೇಶ. ಇಲ್ಲೂ ಹಿಂದುಗಳಿಗೆ ಬೆಂಬಲಿಸಬೇಡಿ ಎಂದರೆ ಹೇಗೆ? ಹಿಂದುಗಳ ಮೇಲೆ ಎಷ್ಟು ಹಿಂಸೆ ಕೊಡುತ್ತೀರಿ?ನಮಗೆ ಬೇರೆ ಯಾವುದಾದರೂ ಹಿಂದೂ ದೇಶ ಇದೆಯೇ? ಇಲ್ಲಿ ಮುಸಲ್ಮಾನರು ಕ್ರೈಸ್ತರು ಸಂತೋಷವಾಗಿಯೇ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಜರಂಗದಳ ಒಡೆಯುತ್ತೇವೆ ಎಂಬುದು ಆಘಾತಕಾರಿ ಎಂದು ಹೇಳಿದರು.
ಇದೇ ವೇಳೆ ದಿ ಕೇರಳ ಸ್ಟೋರಿ ಕುರಿತು ಮಾತನಾಡಿದ ಅವರು, ಸತ್ಯ ಘಟನೆಯನ್ನು ಚಿತ್ರದ ಮೂಲಕ ಜನರಿಗೆ ತಿಳಿಸಿದಾಗ, ಅದನ್ನು ಬ್ಯಾನ್ ಮಾಡಬೇಕು ಎಂಬುದು ಎಷ್ಟು ಸರಿ? ಇತಿಹಾಸ ಜನರಿಗೆ ಗೊತ್ತಾಗಲೇಬೇಕು. ಯಾವುದೇ ಚಿತ್ರ ಬಿಡುಗಡೆಗೆ ಮುನ್ನ ಸೆನ್ಸಾರ್ ನಡೆಯುತ್ತದೆ. ಆಘಾತಕಾರಿ ಪ್ರಚೋದನಕಾರಿ ವಿಚಾರಗಳಿದ್ದರೆ ಪ್ರದರ್ಶನ ಆಗೋದಿಲ್ಲ. ಸೆನ್ಸಾರ್ ಆಗಿ ಬಂದಿದೆ ಎಂದರೆ ಎಲ್ಲರೂ ನೋಡುವ ಚಿತ್ರ ದಿ ಕೇರಳ ಸ್ಟೋರಿ ಎಂದು ಕಿಡಿಕಾರಿದರು.
ಕಾಶ್ಮೀರಿ ಫೈಲ್ಸ್ ಚಿತ್ರ ಬಂದಾಗಲೂ ಇದೇ ತರದ ಚರ್ಚೆಗಳು ಶುರುವಾಗಿತ್ತು. ಇಂತಹ ಚಿತ್ರಗಳು ಸತ್ಯದ ಮುಖವನ್ನು ತೋರಿಸುತ್ತದೆ. ಎಲ್ಲೂ ಸುಳ್ಳನ್ನ ವೈಭವಿಕರಿಸದೇ ನಡೆದ ಸತ್ಯವನ್ನು ಚಿತ್ರದ ಮೂಲಕ ತೋರಿಸಲಾಗಿತ್ತು. ನಡೆದ ಘಟನೆಯ ಆಧಾರದಲ್ಲಿ ನಿರ್ದೇಶಕರು ಚಿತ್ರ ನಿರ್ಮಾಣ ಮಾಡಿದ್ದರು ಎಂದರು.
ದಿ ಕೇರಳ ಸ್ಟೋರಿ ಚಿತ್ರವನ್ನು ಬ್ಯಾನ್ ಮಾಡುವುದಾಗಿ ಹೇಳಿರುವ ಕೇರಳ ಸಿಎಂ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಕೇರಳ ಸಿಎಂ ಮನಸ್ಥಿತಿಯನ್ನು ತೋರಿಸುತ್ತದೆ. ರಾಜ್ಯ ಮತ್ತು ದೆಹಲಿಯಲ್ಲಿ ಎರಡು ಸೆನ್ಸಾರ್ ಬೋರ್ಡ್ ಗಳಿವೆ. ರಾಜ್ಯದಲ್ಲಿ ಲೋಪ ದೋಷ ಆದರೆ ದೆಹಲಿಯ ಸೆನ್ಸಾರ್ ಬೋರ್ಡ್ ನೋಡಿಕೊಳ್ಳುತ್ತದೆ. ಪ್ರತಿಯೊಬ್ಬ ರಾಜ್ಯದ ಪ್ರತಿನಿಧಿ ಸೆನ್ಸಾರ್ ಬೋರ್ಡ್ ನಲ್ಲಿ ಇರುತ್ತಾರೆ. ಸೆನ್ಸಾರ್ ಮೀರಿ ಚಿತ್ರಸಿದ್ಧವಾಗಿದೆ ಎಂದರೆ ಬ್ಯಾನ್ ಮಾಡುವ ಪ್ರಶ್ನೆ ಬರಲ್ಲ ಎಂದರು.