ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಸಿಕೊಳ್ಳಬೇಕೆಂದು ಇಲ್ಲಿನ ನಾಗರಿಕರ ಒಕ್ಕೂಟ ಕರೆ ನೀಡಿದ್ದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಟದ ಮೈದಾನವನ್ನು ವಕ್ಫ್ ಮಂಡಳಿಗೆ ಖಾತೆ ಮಾಡಿಕೊಡುವ ಪ್ರಕ್ರಿಯೆ ನಡೆಯುತ್ತಿದ್ದು, ಅದು ನಿಲ್ಲಬೇಕು. ಜೊತೆಗೆ ಮೈದಾನ ಬಿಬಿಎಂಪಿಯ ಸ್ವತ್ತಾಗಿಯೇ ಉಳಿಯಬೇಕು ಎಂದು ಆಗ್ರಹಿಸಿ ಹಿಂದುಪರ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದವು. ಚಾಮರಾಜಪೇಟೆಯಲ್ಲಿ ಮೈದಾನ ಸುತ್ತಲು ಹಾಗೂ ಉಳಿದೆಡೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದರು. ಖಾಸಗಿ ಶಾಲೆಗಳು ಕೂಡ ತೆರೆದಿರಲಿಲ್ಲ.
ಬೆಳಗ್ಗೆ 11 ಗಂಟೆ ಸುಮಾರಿಗೆ ನಾಗರಿಕ ಒಕ್ಕೂಟದವರು ಹಾಗೂ ಸ್ಥಳೀಯ ನಿವಾಸಿಗಳು ಮೈದಾನದ ಬಳಿ ಗುಂಪು ಗುಂಪಾಗಿ ಆಗಮಿಸಿದರು. ಅವರನ್ನು ಪೊಲೀಸರು ಮೈದಾನದ ಬಳಿ ಬಾರದಂತೆ ಮಾರ್ಗ ಮಧ್ಯದಲ್ಲಿಯೇ ತಡೆದರು. ಮೈದಾನದ ಸುತ್ತಲು ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು.
ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಚಾಮರಾಜಪೇಟೆ ಭಾಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. 350ಕ್ಕೂ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.