ಹೊಸದಿಗಂತ ವರದಿ, ಮಂಡ್ಯ:
ತಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿರುವುದನ್ನು ಕಂಡರಿಯದ ಸಿದ್ದರಾಮಯ್ಯನವರು ಬೇರೆಯವರ ತಟ್ಟೆಯ ನೊಣ ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್ ಟೀಕಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಘಿ ಬಿ.ಎಸ್. ಯಡಿಯೂರಪ್ಪ ಅವರು ಜೈಲು ಸೇರಿದ್ದೇಕೆ ಎನ್ನುವುದನ್ನು ಬೊಮ್ಮಾಯಿ ಮರೆತಂತೆ ಕಾಣುತ್ತಿದೆ ಎಂದು ಟೀಕಿಸಿರುವುದನ್ನು ಪತ್ರಿಕಾ ಹೇಳಿಕೆಯಲ್ಲಿ ವಿರೋಧಿಸಿರುವ ಮಂಜುನಾಥ್, ಅರ್ಕಾವತಿ ಬಡಾವಣೆಯಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರ ಸೇರಿದಂತೆ ಸಿದ್ದರಾಮಯ್ಯನವರ ವಿರುದ್ಧ ಲೋಕಾಯುಕ್ತದಲ್ಲಿ ಇರುವ 52 ಪ್ರಕರಣಗಳು ಬೆಳಕಿಗೆ ಬರುತ್ತವೆಂಬ ಕಾರಣಕ್ಕೆ ಲೋಕಾಯುಕ್ತಕ್ಕಿದ್ದ ಅಧಿಕಾರವನ್ನು ಕಿತ್ತುಕೊಂಡು ಎಸಿಬಿ ರಚಿಸಿ ತಮ್ಮ ಮೇಲಿನ ಎಲ್ಲಾ ಕೇಸ್ಗಳನ್ನು ನ್ಯಾಯಾಲಯದಿಂದ ಕ್ಲೀನ್ ಪಡೆದಿರುವುದು ಈ ರಾಜ್ಯದ ಜನ ಇನ್ನೂ ಮರೆತಿಲ್ಲ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಆಡಳಿತದಲ್ಲಿ ವಿಜಯನಗರ ಸಾಮ್ರಾಜ್ಯವನ್ನೇ ಮರುಸೃಷ್ಠಿ ಮಾಡಿದ್ದರೆಂಬ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಸ್ವತಃ ವಕೀಲರೂ ಆಗಿರುವ ಸಿದ್ಧರಾಮಯ್ಯ ಅವರಿಗೆ ನ್ಯಾಯಾಲಯದ ನೋಟೀಸ್ ಮತ್ತು ವಾರೆಂಟ್ಗೂ ವ್ಯತ್ಯಾಸ ಗೊತ್ತಿಲ್ಲವೇ ಎಂದು ಟೀಕಿಸಿದ್ದಾರೆ.
ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರು ಉನ್ನತ ವಿದ್ಯಾಭ್ಯಾಸ ಮಾಡುವುದಕ್ಕಾಗಿ ತಿಹಾರಕ್ಕೆ ಹೋಗಿದ್ದರೇ, ಜೈಲಿನಿಂದ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡ ಅವರನ್ನು ಒಲಂಪಿಕ್ ಕ್ರೀಡಾಕೂಟದಲ್ಲಿ ಗೋಲ್ಡ್ ಮೆಡಲ್ ಗೆದ್ದವರಂತೆ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕಿ ಕುಣಿದು ಕುಪ್ಪಳಿಸಿದ್ದು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಎಂದು ಟೀಕಿಸಿದ್ದಾರೆ.
ಭಾರತ ತುಂಡು ಮಾಡುತ್ತೇವೆ ಎನ್ನುವ ಕನ್ನಯ್ಯ ಕುಮಾರ್ನನ್ನು ಪಕ್ಕದಲ್ಲೇ ಇಟ್ಟುಕೊಂಡು, ಇನ್ನೊಂದೆಡೆ ಭಾರತದ ಈ ಮಣ್ಣು ಅಪವಿತ್ರವಾಗಿದೆ. ಅದಕ್ಕಾಗಿ ನಾನು ಯಾವಾಗಲೂ ಷೂ ಹಾಕಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ಾಸ್ಟರ್ ಜೊತೆ ಹಿಂದೂ ಧರ್ಮವನ್ನು ಅವಹೇಳನ ಮಾಡುವ ಭಾಷಣಕ್ಕೆ ತಲೆಯಾಡಿಸುವ ರಾಹುಲ್ಗಾಂಧಿ, ಇಂತಹ ಪಕ್ಷದಿಂದ ಭಾರತ್ ಜೋಡೋ ಪಾದಾಯಾತ್ರೆ. ಇದು ಈ ಶತಮಾನದ ದೊಡ್ಡ ಜೋಕು ಎಂದು ಜರಿದಿರುವ ಅವರು, ಸಿದ್ದರಾಮಯ್ಯ ಇಂತಹ ಜೋಕರ್ ಪಕ್ಷದ ಲೀಡರ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನಾದರೂ ಇಂತಹ ಹಸಿ ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಮತ್ತು ಜನರ ಏಳಿಗೆ ಬಗ್ಗೆ ಸಮರ್ಥ ವಿರೋಧ ಪಕ್ಷದ ನಾಯಕರಂತೆ ಮಾತನಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ