ಹೊಸದಿಗಂತ ವರದಿ,ವಿಜಯಪುರ:
ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಕೊನೆಯ ಹಂತ ತಲುಪಿದ್ದು, ಮುಖ್ಯಮಂತ್ರಿಗಳು ನಮ್ಮ ಸಮಾಜಕ್ಕೆ ಮಿಸಲಾತಿ ನೀಡಿ ನ್ಯಾಯ ಒದಗಿಸಿ ಕೊಟ್ಟು ಮಾತು ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆಯಿದೆ. ಹಾಗಾಗದಿದ್ದಲ್ಲಿ ಡಿ.22 ರಂದೆ `ಬೆಳಗಾವಿ ಸುವರ್ಣಸೌಧ’ಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಪಂಚಮಸಾಲಿ ಹೋರಾಟ ಸಮಿತಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾರಾಣಿ ತುಂಗಳ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿಯಲ್ಲಿ ಡಿ.22 ರಂದು ಪಂಚಮಸಾಲಿ ಮೀಸಲಾತಿ ಹೋರಾಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದು ಕೊನೆಯ ಸಮಾವೇಶವಾಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಘೋಷಣೆ ಮಾಡಿದರೆ. 25 ಲಕ್ಷ ಜನ ಪಂಚಮಸಾಲಿಗಳಿಂದ ಸಮಾವೇಶದ ವೇದಿಕೆಯಲ್ಲಿಯೇ ಸನ್ಮಾನಿಸಿ ಗೌರವಿಸುತ್ತೇವೆ. ಮಾತು ತಪ್ಪಿದರೆ ಸುರ್ವರ್ಣಸೌಧದಿಂದಲೇ ರಾಜ್ಯಾದ್ಯಂತ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.
ಬೆಳಗಾವಿಯಲ್ಲಿ ನಡೆಯಲಿರುವ ಪಂಚಮಸಾಲಿ ಸಮಾವೇಶದಲ್ಲಿ ಭಾಗವಹಿಸಲು ಜಿಲ್ಲೆಯಿಂದ 2000ಕ್ಕೂ ಹೆಚ್ಚು ಜನ ಮಹಿಳೆಯರು ಬರುವ ನಿರೀಕ್ಷೆ ಇದ್ದು, ಪ್ರತಿ ತಾಲೂಕಿನಿಂದ ಮಹಿಳೆಯರಿಗಾಗಿ 5 ಬಸ್ಗಳನ್ನು ಬಿಡಲಾಗುತ್ತಿದೆ ಎಂದರು.
ಹೋರಾಟ ಸಮೀತಿ ಜಿಲ್ಲಾಧ್ಯಕ್ಷೆ ಉಮಾ ಪಾಟೀಲ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಪಂಚಮಸಾಲಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಿ.ಎಂ.ಬಿರಾದಾರ ಮಾತನಾಡಿದರು.
ಶೋಭಾ ಬಿರಾದಾರ, ಗೀತಾ ಅಂಗಡಿ, ಕಸ್ತೂರಿ ಬಿರಾದಾರ, ಅಂಬಿಕಾ ಪಾಟೀಲ, ಸುಜಾತಾ ಜಂಗಮಶೆಟ್ಟಿ, ನ್ಯಾಯವಾದಿ ದಾನೇಶ ಅವಟಿ, ಮಹಾಂತಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.