ಬೆಳ್ಳಿ ಪದಕ ಪಡೆದ ಹಾಕಿ ಕ್ರೀಡಾಪಟುಗಳಿಗೆ ಕ್ರೀಡಾ ಇಲಾಖೆಯಿಂದ ಸನ್ಮಾನ

ಹೊಸದಿಗಂತ ವರದಿ, ಮಡಿಕೇರಿ:

ಸತತ ಪ್ರಯತ್ನ, ನಿರ್ದಿಷ್ಟ ಗುರಿ, ಕಠಿಣ ಶ್ರಮ ಇದ್ದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು ಹೇಳಿದರು.
ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಇತ್ತೀಚೆಗೆ ನಡೆದ ಭಾರತೀಯ 12 ನೇ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 33 ವರ್ಷಗಳ ನಂತರ ಬೆಳ್ಳಿ ಪದಕ ಪಡೆದಿರುವ ಕ್ರೀಡಾಪಟುಗಳಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಭಾರತೀಯ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುವುದು ಶ್ಲಾಘನೀಯ. ತಾವು ಇತರರಿಗೆ ಆದರ್ಶವಾಗಿದ್ದು, ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಕಠಿಣ ಶ್ರಮ, ಸತತ ಪ್ರಯತ್ನದಿಂದ ಇನ್ನೂ ಮಹತ್ತರ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳು ದೊರೆಯುವಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ದೈಹಿಕ ಸಾಮರ್ಥ್ಯವೂ ಬಹಳ ಮುಖ್ಯ ಪಾತ್ರ ವಹಿಸಿದೆ. ಆ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯದ ಕಡೆ ಗಮನ ಹರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿ, ಹಾಕಿ ಕ್ರೀಡೆಯಲ್ಲಿ ವೈಯಕ್ತಿಕ ಪರಿಶ್ರಮದ ಜೊತೆಗೆ ತಂಡದ ಪರಿಶ್ರಮವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಂದು ತಂಡದ ಯಶಸ್ಸಿನ ಹಿಂದೆ ಗುರುಹಿರಿಯರ ಸಲಹೆ ಮಾರ್ಗದರ್ಶನ ಮುಖ್ಯವಾಗಿದೆ ಎಂದರು.
ಬಡತನದಿಂದ ಬಂದು ಇಷ್ಟೆಲ್ಲ ಸಾಧನೆ ಮಾಡಿರುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವಂತಾಗಬೇಕು, ಆ ನಿಟ್ಟಿನಲ್ಲಿ ಆತ್ಮವಿಶ್ವಾಸ, ಕಠಿಣ ಶ್ರಮ, ಗುರಿ ಇಟ್ಟುಕೊಂಡು ಶ್ರಮಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ಹಾಗೂ ಹಾಕಿ ಚಾಂಪಿಯನ್‍ಶಿಪ್ ಪಂದ್ಯಾಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದು ದೇಶಕ್ಕೆ ಮತ್ತು ತಂದೆ-ತಾಯಂದಿರಿಗೆ ಗೌರವ ತರುವಂತಾಗಬೇಕು ಎಂದು ಅಯ್ಯಪ್ಪ ಅವರು ಹೇಳಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅವರು ಮಾತನಾಡಿ, ಐತಿಹಾಸಿಕ ಗೆಲುವನ್ನು ಸಾಧಿಸಿದ ಕ್ರೀಡಾಪಟುಗಳಿಗೆ ಹಾರೈಸಿದ ಅವರು ಮುಂದಿನ ದಿನಗಳಲ್ಲಿ ಹಾಕಿ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವಂತಾಗಲಿ ಎಂದು ಅವರು ಹೇಳಿದರು.
ಮಾಜಿ ಸೈನಿಕ ಜಯ ಚಿನ್ನಪ್ಪ ಅವರು ಮಾತನಾಡಿ, ಕ್ರೀಡೆಯಲ್ಲಿ ಆತ್ಮವಿಶ್ವಾಸ, ಪರಿಶ್ರಮ ಸಾಧಿಸುವ ಗುರಿ ಬಹಳ ಮುಖ್ಯ. ಸಮರ್ಪಣೆ, ನಿರ್ಣಯ, ಭಕ್ತಿ ಈ ಮೂರು ಅಂಶಗಳನ್ನು ಹೊಂದಿದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಅವರು ಮಾತನಾಡಿ ಓದಿನ ಜೊತೆ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಲ್ಲಿ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಶ್ರದ್ಧೆ ಪರಿಶ್ರಮದಿಂದ ಮುನ್ನಡೆಯಬೇಕು ಎಂದರು.
ತಂಡದ ವ್ಯವಸ್ಥಾಪಕರಾದ ರಾಖಿ ಪೂವಣ್ಣ ಅವರು ಮಾತನಾಡಿ ಗುರಿ ಸಾಧಿಸುವ ನಿಟ್ಟಿನಲ್ಲಿ ಪರಿಶ್ರಮದಿಂದ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚೆಯ್ಯಂಡ ಸತ್ಯ, ಕೂಡಿಗೆ ಕ್ರೀಡಾ ಶಾಲೆಯ ಆಡಳಿತಾಧಿಕಾರಿ ಜಯರಾಮ, ಹಾಕಿ ತರಬೇತುದಾರರಾದ ಕೆ.ಕೆ.ಬಿಂದಿಯಾ, ಸುಬ್ಬಯ್ಯ, ಜಿ.ಸುರೇಶ, ಕೊಡವ ಹಾಕಿ ಅಕಾಡೆಮಿ ಸದಸ್ಯರು ಮತ್ತಿತರರು ಇದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಸ್ವಾಗತಿಸಿದರು, ಕೂಡಿಗೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ಬಿ.ಟಿ.ದೇವಕುಮಾರ ನಿರೂಪಿಸಿ, ಶಿಕ್ಷಕ ಎಂ.ಡಿ.ಮುರಳಿ ಅವರು ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!