ಹೊಸ ದಿಗಂತ ವರದಿ, ಮಂಡ್ಯ :
ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಎರಡೇ ದಿನದಲ್ಲಿ ಮಿಸೈಲ್, ಬಾಂಬ್ ದಾಳಿಗಳು ನಮ್ಮನ್ನು ಬೆಚ್ಚಿ ಬೀಳಿಸಿದೆವು. ಜೀವ ಉಳಿಸಿಕೊಳ್ಳಲು ಪ್ಲ್ಯಾoಟ್ ಬಿಟ್ಟು ಬಂಕರ್ಗೆ ಶಿಪ್ಟ್ ಆದೆವು. ಆರು ದಿನಗಳ ಕಾಲ ಬಂಕರ್ನೊಳಗೆ ಜೀವ ಹಿಡಿದು ಬದುಕಿದ್ದೆವು. ನಮ್ಮ ಅಕ್ಕ-ಪಕ್ಕದ ಪ್ರದೇಶಗಳಿಗೆ ಶೆಲ್, ಬಾಂಬ್ ದಾಳಿ ನಡೆದಾಗಲೆಲ್ಲಾ ನಾವಿದ್ದ ಬಂಕರ್ ಕಂಪಿಸುತ್ತಿತ್ತು. ದಿನ ಕಳೆದಂತೆ ನಾವಿರುವ ಬಂಕರ್ ಕೂಡ ಸುರಕ್ಷಿತ ಪ್ರದೇಶವಲ್ಲ ಎಂದರಿತು ಅಲ್ಲಿಂದ ತಾಯ್ನಾಡಿನ ಕಡೆಗೆ ಕಾಲ್ಕಿತ್ತೆವು.
ಉಕ್ರೇನ್ನ ಖಾರ್ಕ್ಯೂ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗಕ್ಕೆ ತೆರಳಿದ್ದ ಗಾಯಿತ್ರಿ ಖನ್ನಾ ಅಲ್ಲಿಂದ ಶನಿವಾರ ಬೆಳಗ್ಗೆ ೯ ಗಂಟೆಗೆ ತಾಲೂಕಿನ ಕೆಆರ್ಎಸ್ನಲ್ಲಿರುವ ತಮ್ಮ ಮನೆಗೆ ಆಗಮಿಸಿದರು. ಯುದ್ಧ ವಾತಾವರಣದಲ್ಲಿ ಖಾರ್ಕ್ಯೂ ನಗರದಲ್ಲಿ ಎಂಟು ದಿನಗಳ ಅನುಭವಗಳನ್ನು ಜೊತೆ ಹಂಚಿಕೊoಡರು.
ಯೂನಿವರ್ಸಿಟಿಯವರು ಬಿಡಲಿಲ್ಲ :
ಯುದ್ಧ ಘೋಷಣೆಯಾದ ಸಮಯದಲ್ಲಿ ಭಾರತೀಯ ರಾಯಭಾರ ಕಚೇರಿಯವರು ಮುಂದೆ ಪರಿಸ್ಥಿತಿ ಏನಾಗುವುದೋ ಗೊತ್ತಿಲ್ಲ. ಸ್ವದೇಶಗಳಿಗೆ ತೆರಳುವವರು ತೆರಳಬಹುದು ಎಂದು ಸಂದೇಶ ನೀಡಿದರು. ಆದರೆ, ಖಾರ್ಕ್ಯೂ ಯೂನಿವರ್ಸಿಟಿಯವರು ಇಲ್ಲಿಂದ ಯಾರೂ ತವರು ದೇಶಗಳಿಗೆ ಹೋಗಬಾರದು. ವಿದ್ಯಾಭ್ಯಾಸ ಮುಗಿಸಿ ಹೋಗುವಂತೆ ಹೇಳಿದ್ದರಿಂದ ನಾವು ಅಲ್ಲಿಯೇ ಉಳಿಯುವಂತಾಯಿತು.
ಎರಡು-ಮೂರು ದಿನ ಏರ್ ಪೋರ್ಟ್ , ವಾಯುನೆಲೆ, ಸರ್ಕಾರಿ ಕಚೇರಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿತು. ನಂತರ ಜನವಸತಿ ಪ್ರದೇಶದ ಮೇಲೆ ಬಾಂಬ್ ದಾಳಿ ಶುರು ಮಾಡಿದಾಗ ನಮಗೆಲ್ಲರಿಗೂ ಭಯವಾಯಿತು. ಕೂಡಲೇ ಪ್ಲ್ಯಾoಟ್ ಬಿಟ್ಟು ಕೆಳಭಾಗದಲ್ಲಿದ್ದ ಬಂಕರ್ಗೆ ಬಂದು ನೆಲೆಯೂರಿದೆವು. ನಾವು ಒಟ್ಟಿಗೆ ನಾಲ್ಕು ಜನರಿದ್ದೆವು. ಸ್ವದೇಶಕ್ಕೆ ಹೋಗುವುದಾದರೆ ಎಲ್ಲರೂ ಒಟ್ಟಿಗೆ ಹೋಗೋಣ. ಇಲ್ಲದಿದ್ದರೆ ಇಲ್ಲೇ ಇರೋಣ ಎಂಬ ತೀರ್ಮಾನಕ್ಕೆ ಬಂದೆವು.