ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕೆ ಸ್ಕೈಬಸ್ ವ್ಯವಸ್ಥೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಂಚಾರ ದಟ್ಟಣೆ ಎದುರಿಸುತ್ತಿರುವ ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕೆ ಸ್ಕೈಬಸ್ ವ್ಯವಸ್ಥೆ ಅಗತ್ಯವಿದ್ದು, ಈ ಕುರಿತ ಸಾಧಕ ಬಾಧಕ ಅಧ್ಯಯನ ನಡೆಸಿ ಮೂರು ತಿಂಗಳಿನಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗುತ್ತದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ ಹೋಟಲ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಶ್ವದ ಹಲವು ನಗರಗಳಲ್ಲಿ ಸ್ಕೈಬಸ್ ಇವೆ. ಇಲ್ಲಿ ಅದು ಸಾಧ್ಯವಾ ಎನ್ನುವ ಕುರಿತು ಬೆಂಗಳೂರು ಸ್ಥಿತಿ ಅಧ್ಯಯನ ನಡೆಸಲು ವಿಶ್ವದ ಎರಡು ಅತ್ಯುನ್ನತ ಸಂಸ್ಥೆಗಳಿಗೆ ಆಹ್ವಾನಿಸಲಾಗುತ್ತಿದೆ. ಮೂರು ತಿಂಗಳಿನಲ್ಲಿ ವರದಿ ತರಿಸಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರದಿಂದಲೇ ಅಗತ್ಯ ಹಣಕಾಸು ನೆರವನ್ನು ಕಲ್ಪಿಸಲಾಗುತ್ತದೆ ಎಂದರು.

ಬಹುಮಾದರಿ ಸಾರಿಗೆ ವ್ಯವಸ್ಥೆ
ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಕಷ್ಟಸಾಧ್ಯ, ಇಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆ ಅಗತ್ಯವಿದೆ. ರೈಲು, ಮೆಟ್ರೋ, ರಸ್ತೆ ಒಂದೇ ಪಿಲ್ಲರ್ ಮೇಲೆ ಇರುವಂತೆ ಮೂರು ಹಂತದ ಸಾರಿಗೆ ವ್ಯವಸ್ಥೆ ಉತ್ತಮ ಆಯ್ಕೆ. ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರೋಪ್ ವೇ, ಕೇಬಲ್ ಕಾರ್ ಬಗ್ಗೆಯೂ ಚರ್ಚಿಸಲಾಗಿದೆ. ಟ್ರಾಲಿ ಬಸ್ ಬೆಂಗಳೂರಿನಲ್ಲಿ ಶುರುವಾಗಬೇಕು. ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಬೆಂಗಳೂರಿಗೆ ಸಾರ್ವಜನಿಕ ಸಾರಿಗೆ ಬಹಳ ಅಗತ್ಯವಿದೆ. ಇಲ್ಲಿ ಪೆಟ್ರೋಲ್ ಬಳಸಿ ಚಲಿಸುವ ವಾಹನಗಳಿಗೆ 10 ರೂ ಖರ್ಚು ಆದರೆ, ಎಲೆಕ್ಟ್ರಿಕ್ ವಾಹನಗಳಿಗೆ ಕೇವಲ 1 ರೂ. ಮಾತ್ರ ಆಗಲಿದೆ‌. ಹಾಗಾಗಿ ಸಾರ್ವಜನಿಕ ಸಾರಿಗೆ, ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುತ್ ವಾಹನಗಳ ಅಳವಡಿಕೆ ಬಹಳ ಮುಖ್ಯವಾಗಿದೆ. ಮುಂದಿನ ಹತ್ತು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಉತ್ಪಾದನೆ ನಿಲ್ಲಲಿದೆ ಹಾಗಾಗಿ ಈಗಿನಿಂದಲೇ ಇವಿ ಗಳ ಬಳಕೆ ಮಾಡಬೇಕು, ಇದರಿಂದ ದರ ಕಡಿಮೆ ಆಗಲಿದೆ. ಪರಿಸರ ಸ್ನೇಹಿ, ಜೀರೋ ಪೊಲ್ಯೂಷನ್ ಕೂಡ ಆಗಲಿದೆ ಎಂದರು.

ಗೊರಗೊಂಟೆಪಾಳ್ಯ ಫ್ಲೈ ಓವರ್ ಸಮಸ್ಯೆ
ಗೊರಗೊಂಟೆಪಾಳ್ಯ ಫ್ಲೈ ಓವರ್ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಚರ್ಚೆ ಆಗಿದೆ. ಹೈವೆ ಕೇಬಲ್ ಕೆಲಸ ಯಾವ ಏಜೆನ್ಸಿ ಮಾಡಬೇಕು ಅಂತ ಚರ್ಚೆ ಆಗಿದೆ. ಹಳೆ ಗುತ್ತಿಗೆದಾರರು ಮುಂದೆ ಬಾರದ ಹಿನ್ನಲೆಯಲ್ಲಿ ಮತ್ತೊಬ್ಬ ಗುತ್ತಿಗೆದಾರರನ್ನು ಕರೆದು ತ್ವರಿತವಾಗಿವಾ ಕೆಲಸ ಆರಂಭಿಸಲಾಗುತ್ತದೆ. ಇನ್ನೆರಡು ಮೂರು ದಿನದಲ್ಲಿ ಈ ಬಗ್ಗೆ ಆದೇಶ ಹೊರಬೀಳಲಿದೆ ಎಂದರು.

ನೋ ಕರೆಪ್ಷನ್, ನೋ ಕಾಂಪ್ರಮೈಸ್ ಇನ್ ಕ್ವಾಲಿಟಿ
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ ಕಾಮಗಾರಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಪಾರದರ್ಶಕ ಕಾಮಗಾರಿ ನಡೆಸುತ್ತಿದ್ದೇವೆ ಹಾಗಾಗಿ ಮೈಸೂರು, ಬೆಂಗಳೂರು ಎಕ್ಸ್​ಪ್ರೆಸ್ ವೇ ನಲ್ಲಿ ಅಕ್ರಮ ನಡೆದಿಲ್ಲ. ಡ್ರೈನೇಜ್ ವ್ಯವಸ್ಥೆಯಲ್ಲಿ ಸಮಸ್ಯೆವಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ, ಅದನ್ನು ಸರಿಪಡಿಸಲಾಗುತ್ತದೆ, ನೋ ಕರೆಪ್ಷನ್, ನೋ ಕಾಂಪ್ರಮೈಸ್ ಇನ್ ಕ್ವಾಲಿಟಿ. ಹೊಸ ತಂತ್ರಜ್ಞಾನ ಬಳಸಿ ಕೆಲಸ ಮಾಡಲಿದ್ದೇವೆ ಎಂದರು.

ಸೀಟ್ ಬೆಲ್ಟ್ ಅಭಿಯಾನಕ್ಕೆ ಅಮಿತ್ ಬಚ್ಚನ್, ಅಕ್ಷಯ್ ಸಹಕಾರ
ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಅಪಘಾತದ ವೇಳೆ ಹೆಚ್ಚಿನ ಸಾವು ಸಂಭವಿಸುತ್ತಿದೆ, ಕ್ಲಿಪ್ ಇರಿಸಿ ವಾಹನ ಚಲಾಯಿಸುತ್ತಿದ್ದಾರೆ ಇದು ಸರಿಯಲ್ಲ. ನನ್ನ ವಾಹನ ಚಾಲಕ ಕೂಡ ಇದೇ ತಪ್ಪು ಮಾಡಿದ್ದ, ಅವನಿಗೂ ತಿಳಿ ಹೇಳಿದ್ದೇನೆ. ಪ್ರತಿಯೊಬ್ಬರೂ ಈ ವಿಚಾರದಲ್ಲಿ ಜಾಗೃತಿ ವಹಿಸಬೇಕು. ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸಂಭಾವನೆ ಪಡೆಯದೆ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ ಹಾಗಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಫಾಸ್ಟ್ ಟ್ಯಾಗ್ ಬದಲು ನಂಬರ್ ಪ್ಲೇಟ್ ಮೂಲಕ ಪಾವತಿ:
ಟೋಲ್​ಗಳ ಮುಂದೆ ಸರದಿ ಸಾಲು ತಪ್ಪಿಸಲು ಫಾಸ್ಟ್​ಟ್ಯಾಗ್ ವ್ಯವಸ್ಥೆ ಜಾರಿಗೆ ತರಲಾಗಿದೆ ಆದರೂ ಟೋಲ್​ಗಳ ಮುಂದೆ ಸಮಸ್ಯೆ ತಪ್ಪಿಲ್ಲ ಹಾಗಾಗಿ ನಂಬರ್ ಪ್ಲೇಟ್ ಮೂಲಕವೇ ಹಣ ಕಡಿತ ಮಾಡುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ, ಟೋಲ್ ವಿಳಂಬ ಸರಿಪಡಿಸಲು ಫಾಸ್ಟ್ ಟ್ಯಾಗ್ ಬದಲು ಹೊಸ ವಿಧಾನ ತರಲಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!