ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಅಲಪುಳದಲ್ಲಿ ನಡೆದ ಪಿಎಫ್ಐ ರ್ಯಾಲಿಯಲ್ಲಿ ಹಿಂದುಗಳ ವಿರುದ್ಧವಾಗಿ ಕೂಗಿದ ಘೋಷಣೆಯನ್ನು ರಾಜ್ಯಾಧ್ಯಕ್ಷ ಸಿಪಿ ಮುಹಮ್ಮದ್ ಬಶೀರ್ ಸಮರ್ಥಿಸಿಕೊಂಡಿದ್ದು ಅದು ಆರೆಸ್ಸೆಸ್ ನ ಭಯೋತ್ಪಾದನೆಯ ವಿರುದ್ಧವಾಗಿ ಹೇಳಿದ್ದು, ಇದರಿಂದ ಯಾವುದೇ ಕಾನೂನಿಗೆ ಧಕ್ಕೆಯಾಗಿಲ್ಲ ಎಂದಿದ್ದಾನೆ.
ಈ ರ್ಯಾಲಿಯಲ್ಲಿ ಎಳೆವಯಸ್ಸಿನ ಹುಡುಗನೊಬ್ಬ ಹಿಂದುಗಳೇ ನೀವು ತೆಪ್ಪಗೆ ಬದುಕುವುದಾದರೆ ನಮ್ಮ ನೆಲದಲ್ಲಿ ಬದುಕಿ, ಇಲ್ಲವೇ ಯಮ ನಿಮ್ಮ ಮನೆಗೆ ಬರುತ್ತಾನೆ ಎಂದು ಪ್ರಚೋದನಕಾರಿಯಾಗಿ ಹೇಳುತ್ತಿರುವುದು ವೈರಲ್ ಆಗಿತ್ತು, ಕೇರಳ ಹೈಕೋರ್ಟ್ ಕೂಡ ಇದಕ್ಕೆ ಕಳವಳ ವ್ಯಕ್ತಪಡಿಸಿತ್ತು. ಆದರೆ ಇದನ್ನು ರಾಜ್ಯಾಧ್ಯಕ್ಷ ಸಿಪಿ ಮುಹಮ್ಮದ್ ಬಶೀರ್ “ಪಿಎಫ್ಐ ರ್ಯಾಲಿಯು ಈ ನೆಲದ ಕಾನೂನಿನ ಅಡಿಯಲ್ಲೇ ನಡೆದಿದೆ. ಇಲ್ಲಿ ಯಾವುದೇ ಕಾನೂನಿಗೆ ಧಕ್ಕೆಯಾಗಿಲ್ಲ. ಈ ರ್ಯಾಲಿಯ ಯಶಸ್ಸನ್ನು ಸಹಿಸಿಕೊಳ್ಳಲಾಗದ ಕೆಲವರು ಇದನ್ನು ತಿರುಚುತ್ತಿದ್ದಾರೆ. 15 ವರ್ಷದ ಬಾಲಕ ಕೂಗಿದ ಘೋಷಣೆಗಳು ಮೂಲತಃ ಆರೆಸ್ಸೆಸ್ ವಿರುದ್ಧವಾಗಿ ಅದರಲ್ಲೂ ಆರೆಸ್ಸೆಸ್ ಭಯೋತ್ಪಾದನೆ ವಿರುದ್ಧವಾಗಿ ಕೂಗಿದ್ದು. ಅದರಲ್ಲಿನ ಎರಡು ವಾಕ್ಯಗಳು ತಪ್ಪಾಗಿದೆ ಅದನ್ನೇ ಹೈಲೈಟ್ ಮಾಡಿ ಪಿಎಫ್ಐಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ” ಎಂದಿದ್ದಾನೆ.
“ಪಿಎಫ್ಐ ಬೆದರಿಕೆಗೆ ಬಗ್ಗುವುದಿಲ್ಲ ಎಂಬುದನ್ನು ತೋರಿಸಲು ಈ ಕಾರ್ಯಕ್ರಮ ಮಾಡಿದ್ದೇವೆ. ನಾವು ನಮ್ಮ ಚಟುವಟಿಕೆಗಳನ್ನು ಮತ್ತು ನಮ್ಮ ಸಿದ್ಧಾಂತವನ್ನು ಸಾರ್ವಜನಿಕರಿಗೆ ತೋರಿಸುತ್ತೇವೆ. ಪಿಎಫ್ಐ ಸಂಪೂರ್ಣವಾಗಿ ಜನರೊಂದಿಗೆ ಸಾಮರಸ್ಯವನ್ನು ಹೊಂದಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿದೆ. ಪಿಎಫ್ಐ ಕ್ರಿಶ್ಚಿಯನ್ ಸಮುದಾಯ ಮತ್ತು ಹಿಂದೂ ಸಮುದಾಯದ ವಿರೋಧಿಯಲ್ಲ. ಆದರೆ ಆರ್ಎಸ್ಎಸ್ ಭಯೋತ್ಪಾದನೆ ವಿರುದ್ಧ ನಮ್ಮ ಪ್ರತಿರೋಧವನ್ನು ಮುಂದುವರಿಸುತ್ತೇವೆ” ಎಂದು ಹೇಳಿಕೆ ನೀಡಿದ್ದಾನೆ.