ಹೊಸ ದಿಗಂತ ವರದಿ, ವಿಜಯನಗರ:
ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿ ಹಂಪಿ ಶುಗರ್ಸ್ ಪ್ರೈ.ಲಿ. ಸಕ್ಕರೆ ಕಾರ್ಖಾನೆ ಶೀಘ್ರದಲ್ಲೇ ಸ್ಥಾಪನೆಯಾಗಲಿದ್ದು, ಇದಕ್ಕೆ ಸಚಿವ ಸಂಪುಟ ಸಭೆಯ ಒಪ್ಪಿಗೆ ನೀಡಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬುಧವಾರ ಮಾತನಾಡಿದ ಅವರು, ಕಳೆದ ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ನಾನಾ ಕಾರಣಗಳಿಂದ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿತ್ತು. ವಿಜಯನಗರ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು ಟನ್ ಗಳಷ್ಟು ಕಬ್ಬನ್ನು ಬೆಳೆಯಲಾಗುತ್ತಿದ್ದು, ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗುವುದರಿಂದ ರೈತರಿಗೆ ಅನುಕೂಲವಾಗಲಿದೆ, ನಿರುದ್ಯೋಗ ಯುವಕರಿಗೆ ಉದ್ಯೋಗ ಅವಕಾಶಗಳು ದೊರೆಯಲಿದೆ ಎಂದರು.
ಇದೀಗ 82 ಎಕರೆ ಪ್ರದೇಶದಲ್ಲಿ ಹಂಪಿಶುಗರ್ಸ್ ಕಾರ್ಖಾನೆ ತಲೆ ಎತ್ತಲಿದ್ದು, ಇದಕ್ಕೆ ಬೇಕಾದ ಸ್ಥಳವನ್ನು ನೀಡಲು ಕಂದಾಯ ಇಲಾಖೆ ಒಪ್ಪಿಗೆ ಸೂಚಿಸಿದೆ. ತಾಲೂಕಿನ ಜಂಬೂನಾಥನಹಳ್ಳಿಯಲ್ಲಿ 454 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಹಂಪಿ ಶುಗರ್ಸ್ ಪ್ರೈ.ಲಿ.ಕಾರ್ಖಾನೆ ಸಂಸದ ಜಿ.ಎಂ. ಸಿದ್ದೇಶ್ವರ ಅವತ ಒಡೆತನದ ಕಾರ್ಖಾನೆಯಾಗಿದೆ ಎಂದು ತಿಳಿಸಿದರು. ನೂತನ ಕಾರ್ಖಾನೆ ಆರಂಭವಾಗುತ್ತಿರುವ ಹಿನ್ನೆಲೆ ಸ್ಥಳೀಯವಾಗಿ 2 ಸಾವಿರಕ್ಕೂ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗಲಿದ್ದು, ಶೀಘ್ರವೇ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಸಕ್ಕರೆ ಕಾರ್ಖಾನೆಯನ್ನು ಪುನಃ ಸ್ಥಾಪಿಸಬೇಕೆಂಬುದು ಇಲ್ಲಿನ ಸ್ಥಳೀಯರ ಬೇಡಿಕೆಯಾಗಿತ್ತು. ಅವರ ಮನವಿಗೆ ಸ್ಪಂದಿಸಿ ಕಾರ್ಖಾನೆ ಸ್ಥಾಪಿಸಲು ಸಹಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ತಿಳಿಸಿದ್ದಾರೆ.