Saturday, December 9, 2023

Latest Posts

60 ಸ್ಮಾರಕಗಳ ಸಂರಕ್ಷಣೆಗೆ ಶೀಘ್ರದಲ್ಲಿ ಅಧಿಸೂಚನೆ: ಸಚಿವ ಪಾಟೀಲ್

ಹೊಸದಿಗಂತ ವರದಿ, ಬಾಗಲಕೋಟೆ:

ಸಂರಕ್ಷಣೆಗೆ ಆಯ್ಕೆ ಮಾಡಲಾದ 60 ಸ್ಮಾರಕಗಳ ಸಂರಕ್ಷಣೆಗೆ ಡಿಸೆಂಬರ 30 ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದಡಿ ಸೋಮವಾರ ಪ್ರವಾಸೋದ್ಯಮ ತಾಣ ಐಹೊಳೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಯಿಂದ ಅರ್ಧದಷ್ಟು ಸ್ಮಾರಕಗಳ ಸಂರಕ್ಷಣೆಗೆ ತೆಗೆದುಕೊಂಡಿದ್ದು, ರಾಜ್ಯಕ್ಕೆ ಸಂಬಂಧಿಸಿದ 61 ಸ್ಮಾರಕಗಳ ಪೈಕಿ ಈಗಾಗಲೇ ಒಂದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 60 ಸ್ಮಾರಕ ಸಂರಕ್ಷಣೆಗೆ ಡಿಸೆಂಬರ 30 ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ತಿಳಿಸಿದರು.

ಐಹೊಳೆ ಪ್ರವಾಸಿ ತಾಣಗಳಲ್ಲಿ ಬಹಳಷ್ಟು ದಿನಗಳಿಂದ ಸ್ಮಾರಕಗಳಲ್ಲಿ ಕುಟುಂಬಗಳು ವಾಸವಾಗಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಉಪಯೋಗಿಸಿಕೊಂಡಿದ್ದು, ಬೇರೆಡೆ ನಿವೇಶನ ನೀಡಿದಲ್ಲಿ ಸ್ಥಳಾಂತವಾಗಲು ಎಲ್ಲ ರೀತಿಯ ಸಹಕಾರ ಸಹ ನೀಡುತ್ತಿದ್ದಾರೆ.
ಸ್ಮಾರಕಗಳಲ್ಲಿ ವಾಸವಾಗಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಅವುಗಳನ್ನು ಅಭಿವೃದ್ದಿಪಡಿಸಲು ಸರಕಾರ ತಿರ್ಮಾನಿಸಿದೆ. ಬರುವ ಜನವರಿ ಅಂತ್ಯದೊಳಗಾಗಿ ಐಹೊಳೆ ಗ್ರಾಮದ 124 ಕುಟುಂಬಗಳಿಗೆ ನಿವೇಶನ ನೀಡಲು ಭೂಮಿ ಖರೀದಿ ಕಾರ್ಯ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಪ್ರಶಾಂತ ಮನೋಹರ, ಭಾರತೀಯ ಪುರಾತತ್ವ ಇಲಾಖೆಯ ದೇವರಾಜ, ಪ್ರಮೋದ, ಪ್ರಶಾಂತ ಕುಲಕರ್ಣಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಮಾಜಿ ಸಚಿವ ಎಸ್.ಜಿ.ನಂಜಯ್ಯನಮಠ, ಮಾಜಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!