ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮಾರ್ಚ್ 29ರ ಬೆಳಗಿನ 10.44ಕ್ಕೆ ಶ್ರೀಲಂಕಾದ ಪ್ತ್ರಕರ್ತರೊಬ್ಬರು ಟ್ವೀಟ್ ಮಾಡುತ್ತಾರೆ. “ಪೆರಡೆನಿಯಾ ಆಸ್ಪತ್ರೆಯಲ್ಲಿ ನಡೆಯಬೇಕಿದ್ದ ಸರ್ಜರಿಗಳು ನಡೆಯುತ್ತಿಲ್ಲ. ಏಕೆಂದರೆ ಅದಕ್ಕೆ ಬೇಕಾದ ಔಷಧಗಳಿಲ್ಲ. ಕೇವಲ ತುರ್ತು ಶಸ್ತ್ರಚಿಕಿತ್ಸೆಗಳು ಮಾತ್ರ ನಡೆಯುತ್ತಿವೆ.”
ಆರ್ಥಿಕ ದಿವಾಳಿತನದಿಂದ ಹಾಹಾಕಾರ ಎದ್ದಿರುವ ಶ್ರೀಲಂಕಾದ ಶೋಚನೀಯ ಸ್ಥಿತಿ ವಿವರಿಸುವ ಟ್ವೀಟ್ ಇದು.
ಇದಕ್ಕೆ ತಕ್ಷಣವೇ ಉತ್ತರ ಬಂದಿದ್ದು ಭಾರತದ ವಿದೇಶ ಸಚಿವ ಎಸ್ ಜೈಶಂಕರ್ ಅವರಿಂದ. “ಇದು ತುಂಬ ಕಳವಳ ಉಂಟುಮಾಡುವ ಸುದ್ದಿ. ಭಾರತವು ಹೇಗೆಲ್ಲ ಸಹಾಯ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ನಮ್ಮ ರಾಯಭಾರ ಕಚೇರಿ ಕಾರ್ಯಪ್ರವೃತ್ತವಾಗಿದೆ” ಎಂದು ಅವರು ಟ್ವೀಟ್ ಮಾಡುತ್ತಾರೆ. ಅದರ ಬೆನ್ನಲ್ಲೇ, ಅಗತ್ಯ ಔಷಧಗಳ ಪೂರೈಕೆಗೆ ಕ್ರಮ ಕೈಗೊಂಡಿರುವುದಾಗಿ ಭಾರತದ ರಾಯಭಾರ ಮಿಷನ್ ಟ್ವೀಟ್ ಮೂಲಕ ಹೇಳುತ್ತದೆ.
Disturbed to see this news. Am asking High Commissioner Baglay to contact and discuss how India can help.@IndiainSL #NeighbourhoodFirst https://t.co/jtHlGwxCBL
— Dr. S. Jaishankar (@DrSJaishankar) March 29, 2022
ಶ್ರೀಲಂಕಾದಲ್ಲಿ ಜನ ಗ್ಯಾಸ್ ಇಲ್ಲದೇ, ಕರೆಂಟ್ ಇಲ್ಲದೇ ಭೀಕರ ಸ್ಥಿತಿ ಅನುಭವಿಸುತ್ತಿದ್ದಾರೆ. ಈ ಹಂತದಲ್ಲಿ ಭಾರತ ಅದಕ್ಕೆ ಪ್ರಮುಖವಾಗಿ ಸಹಾಯ ಮಾಡುತ್ತಿದೆ. ಮೇಲೆ ವಿವರಿಸಿದ ಪ್ರಸಂಗ ಒಂದು ಉದಾಹರಣೆ ಮಾತ್ರ.
- 5 ಬಿಲಿಯನ್ ಡಾಲರಿನಷ್ಟು ಆರ್ಥಿಕ ಸಹಾಯಗಳನ್ನು ಶ್ರೀಲಂಕಾಕ್ಕೆ ಒದಗಿಸುವ ಬದ್ಧತೆಯನ್ನು ಭಾರತ ಪ್ರಕಟಿಸಿದೆ.
- ಮುಖ್ಯವಾಗಿ ಶ್ರೀಲಂಕಾಕ್ಕೆ ಇಂಧನ, ಆಹಾರ ಮತ್ತು ಔಷಧಗಳು ಬೇಕಾಗಿವೆ. ಅದರ ವಿದೇಶಿ ವಿನಿಮಯವೆಲ್ಲ ಬರಿದಾಗಿರುವುದರಿಂದ ಇದೀಗ ಭಾರತ ನೀಡುತ್ತಿರುವ ಸಾಲವೇ ಪ್ರಮುಖವಾಗಿ ಅದರ ಸಹಾಯಕ್ಕೆ ಬರಲಿದೆ.
- ಮಾರ್ಚ್ 27ರಂದು ಖುದ್ದು ದ್ವೀಪರಾಷ್ಟ್ರಕ್ಕೆ ಭೇಟಿ ನೀಡಿದ್ದ ವಿದೇಶ ಸಚಿವ ಜೈಶಂಕರ್ ಅವರು ಶ್ರೀಲಂಕಾವನ್ನು ಆರ್ಥಿಕ ದಿವಾಳಿತನದಿಂದ ಹೊರತರುವುದಕ್ಕೆ ಭಾರತ ಏನೆಲ್ಲ ಸಹಾಯಗಳನ್ನು ಮಾಡಬಹುದು ಎಂಬುದನ್ನು ಸಮಾಲೋಚಿಸಿದ್ದಾರೆ.
ಶ್ರೀಲಂಕಾ ಕೇಂದ್ರಿತ ಜಾಗತಿಕ ರಾಜಕೀಯ
ಚೀನಾದ ಸಾಲದ ಸುಳಿ ಆಪತ್ತಿನ ಸಂದರ್ಭದಲ್ಲಿ ರಕ್ಷಣೆಗೆ ಬರುತ್ತಿಲ್ಲ ಎಂಬುದು ಈ ಬಿಕ್ಕಟ್ಟಿನಿಂದ ಶ್ರೀಲಂಕಾ ಕಲಿಯಬೇಕಾದ ಪಾಠ. ಈ ಹಿಂದಿನ ಕೆಲ ವರ್ಷಗಳಲ್ಲಿ ವಿಪರೀತವಾಗಿ ಚೀನಾದತ್ತ ವಾಲಿದ ಶ್ರೀಲಂಕಾ ಬಂದರುಗಳು ಸೇರಿದಂತೆ ತನ್ನ ಮೂಲ ಸೌಕರ್ಯಗಳನ್ನು ಚೀನಾ ಕೈಗೆ ಕೊಟ್ಟಿತು.
ಇದೀಗ ಅರ್ಥವ್ಯವಸ್ಥೆಯೇ ಕುಸಿದಿರುವ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತಿರುವುದು ಭಾರತವೇ. ಭಾರತದ ಜತೆ ಶ್ರೀಲಂಕಾದ ಪ್ರಮುಖ ನಾಯಕರು ದ್ವಂದ್ವ ನೀತಿ ಅನುಸರಿಸುತ್ತಿದಾರೆ ಎಂಬ ಆಪಾದನೆಗಳಿದ್ದಾಗಲೂ ಈ ಸಂಕಷ್ಟದ ಸಂದರ್ಭದಲ್ಲಿ ಭಾರತವು ಶ್ರೀಲಂಕಾದ ಕೈಹಿಡಿದಿದೆ.
ಶ್ರೀಲಂಕಾವು ಮುಂದಿನ ದಿನಗಳಲ್ಲಿ ಆ ದೇಶದ ತಮಿಳು ಜನಸಂಖ್ಯೆಗೆ ಹೆಚ್ಚಿನ ಸ್ವಾಯತ್ತೆಯನ್ನು ಕೊಡಬೇಕು ಎಂಬುದು ಭಾರತದ ಅಪೇಕ್ಷೆ.