ಹೊಸದಿಗಂತ ಡಿಜಿಟಲ್ ಡೆಸ್ಕ್
ಕೊಲಂಬೊ: ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕಾನ್ಸುಲೇಟ್ ಜನರಲ್ ಜೊತೆಗೆ ನಾರ್ವೆ ಮತ್ತು ಇರಾಕ್ನಲ್ಲಿರುವ ತನ್ನ ರಾಯಭಾರ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ. ಇದು ಏ. 30ರಿಂದ ಜಾರಿಗೆ ಬರಲಿದೆ.
ಸಚಿವ ಸಂಪುಟದ ಇತ್ತೀಚಿನ ನಿರ್ಧಾರದ ಅನುಸಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಾರ್ವೆಯ ಓಸ್ಲೋದಲ್ಲಿರುವ ಶ್ರೀಲಂಕಾ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಪ್ರಕ್ರಿಯೆ ಪ್ರಾರಂಭಿಸಿದೆ. ಇರಾಕ್ ಗಣರಾಜ್ಯ ಬಾಗ್ದಾದ್ನಲ್ಲಿರುವ ಶ್ರೀಲಂಕಾ ರಾಯಭಾರ ಕಚೇರಿ ಮತ್ತು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಶ್ರೀಲಂಕಾ ಕಾನ್ಸುಲೇಟ್ ಜನರಲ್ ಕಚೇರಿಗಳು ಏ. 30ರಿಂದ ಮುಚ್ಚಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
1948ರಲ್ಲಿ ಸ್ವಾತಂತ್ರ್ಯದ ನಂತರ ಶ್ರೀಲಂಕಾವು ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಹಣ್ಣುಗಳು ಮತ್ತು ತರಕಾರಿಗಳಂತಹ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವಾಗ ಈ ಕ್ರಮ ಜಾರಿಗೆ ಬಂದಿದೆ. ರಾಯಭಾರ ಕಚೇರಿಗಳ ಮುಚ್ಚುವಿಕೆಯು ಆ ದೇಶಗಳೊಂದಿಗೆ ಶ್ರೀಲಂಕಾದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶ್ರೀಲಂಕಾ ಸರಕಾರ ಹೇಳಿದೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಕಾರ್ಯಕಾರಿ ಅಧ್ಯಕ್ಷೀಯ ವ್ಯವಸ್ಥೆ ರದ್ದುಗೊಳಿಸುವಂತೆ ಕರೆ ನೀಡಿದ್ದಾರೆ.
ಶ್ರೀಲಂಕಾವು ಆಹಾರ ಮತ್ತು ಇಂಧನ ಕೊರತೆಯ ಜೊತೆಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇದು ದ್ವೀಪ ರಾಷ್ಟ್ರದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ದೇಶದ ಆರ್ಥಿಕತೆಯು ಪತನದಲ್ಲಿದೆ.
ಏತನ್ಮಧ್ಯೆ, ಶ್ರೀಲಂಕಾದಲ್ಲಿ ಶನಿವಾರ ಸಂಜೆ 6 ಗಂಟೆಗೆ ವಿಧಿಸಲಾಗಿದ್ದ 36 ತಾಸುಗಳ ಸುದೀರ್ಘ ಕರ್ಫ್ಯೂ ಅನ್ನು ಸೋಮವಾರ ಬೆಳಗ್ಗೆ 6 ಗಂಟೆಗೆ ತೆಗೆದುಹಾಕಲಾಯಿತು. ಆದರೆ ದೇಶವು ಇನ್ನೂ ತುರ್ತು ಪರಿಸ್ಥಿತಿಯಲ್ಲಿದೆ.