ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಪ್ರಜೆಗಳ ಪ್ರತಿಭಟನೆಯ ಬಿಸಿಯಿಂದ ಬೇರೆ ದೇಶಕ್ಕೆ ಪಲಾಯನವಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ನಿನ್ನೆ ಮೇಲ್ ಮೂಲಕ ತಮ್ಮ ರಾಜೀನಾಮೆಯನ್ನು ಸ್ಪೀಕರ್ಗೆ ರವಾನೆ ಮಾಡಿದ್ರು. ಇಂದು ಗೋಟಬಯ ರಾಜಪಕ್ಸೆ ರಾಜೀನಾಮೆ ಅಂಗೀಕರಿಸಿರುವುದಾಗಿ ಸಂಸತ್ತಿನ ಸ್ಪೀಕರ್ ಮಹಿಂದಾ ಅಭಯವರ್ಧನ ಘೋಷಿಸಿದ್ದಾರೆ. ಮಾಲ್ಡೀವ್ಸ್ನಿಂದ ನಿನ್ನೆ ಸಿಂಗಾಪುರಕ್ಕೆ ಬಂದಿಳಿದ ಗೋಟಬಯ ರಾಜಪಕ್ಸೆ, ಅಲ್ಲಿಂದ ಇ-ಮೇಲ್ ಮೂಲಕ ಮಹಿಂದಾ ಅಭಯವರ್ಧನ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು. ಇ-ಮೇಲ್ ಮೂಲಕ ಕಳುಹಿಸಲಾದ ರಾಜೀನಾಮೆಯ ಕಾನೂನುಬದ್ಧತೆಯನ್ನು ಸ್ಪೀಕರ್ ಕಚೇರಿ ಪರಿಶೀಲಿಸಿ ಅಂಗೀಕಾರ ಮಾಡಿದೆ.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಕಾನೂನು ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. ಈ ನಿಟ್ಟಿನಲ್ಲಿ ನಾಳೆ ಸಂಸತ್ ಸದಸ್ಯರೊಂದಿಗೆ ಸಭೆ ಏರ್ಪಡಿಸಿ, ಒಂದು ವಾರದೊಳಗೆ ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸೆ ರಾಜೀನಾಮೆ ಬಳಿಕ ಆ ದೇಶದಲ್ಲಿ ಪ್ರತಿಭಟನೆಗಳು ಕಡಿಮೆಯಾಗಿವೆ. ವಿಕ್ರಮ ಸಿಂಘೆ ಪ್ರಸ್ತುತ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಅಶಾಂತಿ ತಡೆಯಲು ಶ್ರೀಲಂಕಾ ಸೇನೆ ಕ್ರಮ ಕೈಗೊಳ್ಳುತ್ತಿದೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಇಂಧನ, ಆಹಾರ ಮತ್ತು ಇತರ ಮೂಲಭೂತ ಅವಶ್ಯಕತೆಗಳ ಸಮರ್ಪಕ ಪೂರೈಕೆಯ ಕೊರತೆಯಿಂದಾಗಿ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.