ಹೊಸದಿಗಂತ ವರದಿ, ಕಲಬುರಗಿ:
ಈಚಲು ಮರದಿಂದ ನೀರಾ ಇಳಿಸುವುದು ಹಾಗೂ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಈಡಿಗ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಬುಧವಾರ ವಿವಿಧ ಬೇಡಿಕೆ ಈಡೇರಿಕೆಗಳನ್ನು ಆಗ್ರಹಿಸಿ ಚಿಂಚೋಳಿಯಿಂದ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಸುಮಾರು 100 ಕೀಮಿ ವರೆಗೂ ಹಮ್ಮಿಕೊಳ್ಳಲಾದ ಪಾದಯಾತ್ರೆ ಅಂತ್ಯಗೊಳಿಸಿ ಅವರು ಮಾತನಾಡಿದರು.
ಈಡಿಗರ ಕುಲಕಸುಬು ಕಸಿದುಕೊಂಡ ಸರಕಾರ ತಳಸಮುದಾಯವನ್ನು ಬೀದಿಪಾಲು ಮಾಡಲು ಯತ್ನಿಸುತ್ತಿದೆ. ಕುಲಕಸುಬಾದ ನೀರಾ ಇಳಿಸುವುದು ಹಾಗೂ ಬೇರೆ ರಾಜ್ಯಗಳಿಂದ ಶೆಂದಿ ತಂದು ಕರ್ನಾಟಕದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ನಿಗಮಕ್ಕೆ 500 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.