ಹೊಸದಿಗಂತ ವರದಿ ಕಾಸರಗೋಡು:
ಶ್ರೀರಾಮ ಸತ್ಸಂಗ ಸಮಿತಿಯ ಆಶ್ರಯದಲ್ಲಿ ಕರ್ಕಟಕ ಮಾಸದ ಶ್ರೀರಾಮ ಕಥಾ ಸತ್ಸಂಗ ಹಾಗೂ ಶ್ರೀರಾಮ ನಾಮ ಜಪ ಧ್ಯಾನ ಕಾರ್ಯಕ್ರಮವು ಜು.17ರಿಂದ ಕುಂಬಳೆ ಕೃಷ್ಣನಗರದ ಶ್ರೀ ಮೌನೇಶ ಮಂದಿರಲ್ಲಿ ಜರಗಲಿದೆ. ರಾಮದರ್ಶ ಜೀವನ ಗ್ರಾಮ ದರ್ಶ ಮನೆ ಎಂಬ ಧ್ಯೇಯೋದ್ದೇಶದೊಂದಿಗೆ ಒಂದು ವಾರ ಪರ್ಯಂತ ನಡೆಯುವ ಈ ವಿಶೇಷ ಶ್ರೀರಾಮ ಕಥಾ ಸತ್ಸಂಗ ಪಾರಾಯಣವು ಜು.23ರಂದು ಸಮಾಪ್ತಿಗೊಳ್ಳಲಿದೆ. ಕೀರ್ತನಾ ಪ್ರವೀಣ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ದಿನಂಪ್ರತಿ ಶ್ರೀರಾಮ ಚರಿತೆಯ ಸಂಕೀರ್ತನೆ ಹಾಗೂ ಕಥಾ ಪ್ರವಚನ ನಡೆಸಿಕೊಡುವರು.
ಕಾರ್ಯಕ್ರಮಗಳ ವಿವರ:
ಜು.17ರಂದು ಅಪರಾಹ್ನ 3 ಗಂಟೆಗೆ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಶ್ರೀರಾಮ ದೇವರ ವಿಗ್ರಹವನ್ನು ಕೃಷ್ಣನಗರ ಶ್ರೀ ಮೌನೇಶ ಮಂದಿರಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು. ಸಂಜೆ 4.30ಕ್ಕೆ ಜರಗುವ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ರಘನಾಥ ಪೈ, ಸಾಮಾಜಿಕ ಮುಂದಾಳು ಶಿವರಾಮ ಬೀಚ್ ರೋಡು, ಸಜೇಶ್ ಪೊದುವಾಳ್, ಡಾ.ಕಿಶೋರ್ ಕುಮಾರ್, ವಕೀಲ ಕೆ.ಸದಾನಂದ ಕಾಮತ್, ಕಣಿಪುರ ಮಾಸ ಪತ್ರಿಕೆಯ ಸಂಪಾದಕ, ಲೇಖಕ ಎಂ.ನಾ.ಚಂಬಲ್ತಿಮಾರ್ ಭಾಗವಹಿಸುವರು.
ಸಂಜೆ 5.45ಕ್ಕೆ ಭಜನೆ, 6.30ಕ್ಕೆ ಶ್ರೀರಾಮ ಕಥಾ ಸತ್ಸಂಗ ಬಳಿಕ ರಾತ್ರಿ 8 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಪ್ರತಿದಿನವೂ ಸಂಜೆ 5.45ರಿಂದ ಸತ್ಸಂಗ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಜು.23 ರಂದು ಸಂಜೆ 5 ಗಂಟೆಗೆ ಜರಗುವ ಸಮರೋಪ ಸಮಾರಂಭದಲ್ಲಿ ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ, ಜಿತೇಂದ್ರ ಪ್ರತಾಪನಗರ, ಕಲಾರತ್ನ, ವಕೀಲ ಶಂ.ನಾ.ಅಡಿಗ ಕುಂಬಳೆ, ಡಾ.ಡಿ.ಪುರುಷೋತ್ತಮ ಭಟ್, ಉದ್ಯಮಿ ವಿಠಲ ಆಚಾರ್ಯ, ನಾಗೇಶ್ ಕಾರ್ಲೆ, ಶೋಭಾ ಎಸ್. ಮೊದಲಾದವರು ಪಾಲ್ಗೊಳ್ಳಲಿದ್ದಾರೆ.