ಹೊಸದಿಗಂತ ವರದಿ, ಮಡಿಕೇರಿ
ಮೇ 16ರಂದೇ ಶಾಲೆಗಳು ಆರಂಭವಾಗಲಿದ್ದು, ಮೇ 19ರಂದು ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದು, ಇದರೊಂದಿಗೆ ಶಾಲೆ ಆರಂಭ ಹಾಗೂ ಎಸ್.ಎಸ್.ಎಲ್.ಸಿ.ಫಲಿತಾಂಶದ ಬಗ್ಗೆ ಇದ್ದ ಅನಿಶ್ಚಿತತೆಯನ್ನು ದೂರ ಮಾಡಿದ್ದಾರೆ.
ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಅವರು ಶುಕ್ರವಾರ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇ 19ರಂದು ಬೆಳಗ್ಗೆ ಆನ್ ಲೈನ್’ಗೆ ಫಲಿತಾಂಶ ಅಪ್ಲೋಡ್ ಆಗಲಿದ್ದು, ಮಧ್ಯಾಹ್ನದ ನಂತರ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಮೇ 16ರಂದು ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಮುಂದಿನ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು, ತುಮಕೂರಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ವಿವರಿಸಿದರು.
ಸಚಿವ ಸಂಪುಟ ಪುನರ್ ರಚನೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾಗೇಶ್ ಅವರು, ವಿದೇಶ ಪ್ರವಾಸದ ಬಳಿಕ ಮುಖ್ಯಮಂತ್ರಿಯವರೇ ಈ ಬಗ್ಗೆ ತಿಳಿಸಲಿದ್ದಾರೆ ಎಂದರಲ್ಲದೆ, ಕೊಡಗಿನ ಇಬ್ಬರು ಹಿರಿಯ ಶಾಸಕರಿಗೆ ಅವಕಾಶ ದೊರೆಯಬೇಕೆಂಬುದು ತಮ್ಮ ಬಯಕೆಯೂ ಆಗಿದೆ ಎಂದು ನುಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ ಹಾಜರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ