ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಟೋಕನ್ ಪಡೆದುಕೊಳ್ಳಲು ಅಲಿಪಿರಿ ಛತ್ರದ ಬಳಿ ಭಕ್ತಾದಿಗಳ ನೂಕು ನುಗ್ಗಲು ಉಂಟಾಗಿ ಮೂವರು ಭಕ್ತರಿಗೆ ಗಾಯಗಳಾಗಿವೆ. ಅಪಾರ ಭಕ್ತಸಮೂಹದಲ್ಲಿ ಟಿಕೆಟ್ ಪಡೆಯಲು ನಾಮುಂದು ತಾಮುಂದು ಎಂದು ಕಬ್ಬಿಣದ ಬೇಲಿಯನ್ನು ಹಾರಲು ಪ್ರಯತ್ನಿಸಿ ನೂಕು ನುಗ್ಗಲು ಉಂಟಾಗಿದೆ.
ಈ ಘಟನೆಗೆ ಟಿಟಿಡಿಯ ವೈಫಲ್ಯವೇ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿವೆ. ರಣಬಿಸಿಲಿನಲ್ಲಿ ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಪುಟ್ಟ ಮಕ್ಕಳೊಂದಿಗೆ ಬಂದ ಭಕ್ತರು ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಭಕ್ತಾದಿಗಳು ಆಕ್ರೋಶ ಹೊರಹಾಕಿದ್ದಾರೆ.
ಕೊರೊನಾ ಕಟ್ಟು ನಿಟ್ಟಿನ ಕ್ರಮಗಳನ್ನು ಟಿಟಿಡಿ ತೆರವುಗೊಳಿಸಿದ್ದು, ಸ್ವಾಮಿ ದರ್ಶನಕ್ಕೆ ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇಡೀ ತಿರುಮಲ ಕ್ಷೇತ್ರ ಭಕ್ತರಿಂದ ಗಿಜಿಗುಡುತ್ತಿದೆ. ಶ್ರೀವಾರಿ ದರ್ಶನಕ್ಕೆ ಟಿಕೆಟ್ ತೆಗೆದುಕೊಳ್ಳಲು ಸರತಿ ಸಾಲಿನಲ್ಲಿ ಜನ ಕಾದು ಕಾದು ಸುಸ್ತಾಗಿದ್ದಾರೆ. ಇಷ್ಟು ದಿನ ಬಿಕೋ ಎನ್ನುತ್ತಿದ್ದ ಪ್ರದೇಶಗಳು ಈಗ ಗೋವಿಂದಾ..ಗೋವಿಂದ… ಎಂಬ ಘೋಷಣೆಗಳು ಮೊಳಗುತ್ತಿವೆ.