ಹೊಸದಿಗಂತ ವರದಿ, ಬಾಗಲಕೋಟೆ:
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಿಂದ ಯಾವುದೇ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆಯಾಗಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕುಂಠಿತವಾಗಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ನಗರದ ಚರಂತಿಮಠದ ಸಭಾ ಭವನದಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ತಾಲ್ಲೂಕಾ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರು ಪ್ರಾಮಾಣಿಕತೆಹಾಗೂ ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಗ್ರಾಮದಲ್ಲಿ ಅಭಿಪ್ರಾಯ ಕ್ರೂಡೀಕರಣ ಮಾಡುವ ಕೆಲಸ ಗ್ರಾಮಪಂಚಾಯಿತಿ ಸದಸ್ಯರ ಮೇಲೆಇದೆ.ಜಿಲ್ಲಾ ಪಂಚಾಯತ ಹಾಗೂ ತಾಲ್ಲೂಕಿನ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಠೇವಣಿ ಕಳೆದು ಕೊಳ್ಳಲಿದೆ. ಈಗಿನಿಂದಲೇ ಗ್ರಾಮ ಪಂಚಾಯತ ಸದಸ್ಯರು ಮನಸ್ಸು ಮಾಡಿದರೆ ಗುಲಾಲಹಾಕಿಕೊಳ್ಳುವುದು ಸುಲಭ ಎಂದರು.
ಹೊತ್ತಾಳ ಸರ್ಕಾರ ರಾಜ್ಯದಲ್ಲಿದೆ.ಏನು ಕೇಳಿದರೂ ದುಡ್ಡಿಲ್ಲ,ಅಭಿವೃದ್ಧಿ ಕೆಲಸ ಇಲ್ಲ. ನಮಗೆಕೊಡುವ ಅನುದಾನ ಸಹ ನಿಲ್ಲಿಸಿದ್ದಾರೆ. ಪ್ರದೇಶಾಭಿವೃದ್ಧಿ ಅನುದಾನ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಗ್ರಾಮ ಪಂಚಾಯತ ಸದಸ್ಯರು ಗ್ರಾಮದ ಅಭಿವೃದ್ಧಿ ಗೆ ಒತ್ತು ನೀಡಬೇಕು. ತಮ್ಮ ಪಂಚಾಯಿತಗಳನ್ನು ಮಾದರಿ ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ
ನೀಡಿದರು.
ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ಮು.ಬರುವ ಜಿಲ್ಲಾ ಪಂಚಾಯತ ಹಾಗೂ ತಾಲ್ಲೂಕ ಪಂಚಾಯತ ಚುನಾವಣೆ ಬರಲಿದ್ದು ಎಲ್ಲಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ಕೆಲಸ ಮಾಡಬೇಕು ಎಂದರು.
ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಮುಖಂಡ ನಾಗರಾಜ ಹದ್ಲಿ, ಎಸ್.ಎನ್.ರಾಂಪುರ,ಬಸವಂತ ಮೇಟಿ ಮತ್ತಿತರರು ಇದ್ದರು.