ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡಿನ ಕಥೆ ಅಂದ್ರೆ ಯಾರಿಗೆ ಇಷ್ಟವಿಲ್ಲ. ಅದರಲ್ಲೂ ಕಾಡೇ ಹೇಳಿದ ಕಾಡಿನ ಕಥೆ ಎಂದರೆ ಇನ್ನಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ಇಂತಹುದೇ ಒಂದು ಕಾಡಿನ ಕಾಡುವ ಕಥೆ ಹೊಂದಿರುವ ʼಒಂದಂಕಿ ಕಾಡುʼ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಸಂಪೂರ್ಣವಾಗಿ ಉತ್ತರಕನ್ನಡದ ದಟ್ಟ ಕಾಡುಗಳಲ್ಲೇ ಚಿತ್ರೀಕರಿಸಿಲಾದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಮೋಷನ್ ಪೋಸ್ಟರ್ ನಲ್ಲಿರುವ ಸಣ್ಣತುಣುಕು ನೋಡಿದವರಲ್ಲಿ ಕುತೂಹಲ ಕೆರಳಿಸುವಂತಿದೆ.
ಚಿತ್ರವನ್ನು ಶ್ರೀಮಹಾಕಾಳಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ್ದು ರಾಮಚಂದ್ರ ವೈದ್ಯ ನಿರ್ದೇಶನ ಮಾಡಿದ್ದಾರೆ. ʼಜೊತೆಜೊತೆಯಲಿʼ, ʼಶುಭ ವಿವಾಹʼ, ʼಮಾನಸ ಸರೋವರʼ ಮುಂತಾದ ಹಿಟ್ ಧಾರಾವಾಹಿಗಳನ್ನು ಕಿರುತೆರೆಯಲ್ಲಿ ನಿರ್ದೇಶಿಸಿ ಸೈ ಎನ್ನಿಸಿಕೊಂಡಿರುವ ರಾಮಚಂದ್ರ ವೈದ್ಯ ʼಒಂದಂಕೆ ಕಾಡುʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇನ್ನು ಚಿತ್ರಕ್ಕೆ ಗಣೇಶ ಹೆಗಡೆ ಛಾಯಾಗ್ರಹಣವಿದ್ದು ಮಧು ಹೆಗಡೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಜ್ವಲ್ ಪೊನ್ನಣ್ಣ, ಸೋನಿ ಮುಲೆವಾ, ನೀರ್ನಳ್ಳಿ ರಾಮಕೃಷ್ಣ, ಮಧು ಹೆಗಡೆ, ಕಿರಣ್ ನಾಯಕ್, ಮುಂತಾದವರು ಪಾತ್ರ ವರ್ಗದಲ್ಲಿ ಮಿಂಚಿದ್ದಾರೆ. ಇನ್ನು ಈ ಚಿತ್ರವು ತೆಲುಗಿನಲ್ಲಿಯೂ ಬರುತ್ತಿದ್ದು ʼಅನಗನಗ ಒಕ ಅಡವಿʼ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ.