ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ವಿವಾದದ ಕುರಿತು ನಿನ್ನೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶವೊಂದನ್ನು ನೀಡಿದ್ದು, ಸೋಮವಾರ ವಿಚಾರಣೆಯನ್ನುಮುಂದುವರಿಸಲಾಗುವುದು ಎಂದು ಹೇಳಿದೆ.
ಇನ್ನು ಮುಂದಿನ ತೀರ್ಪು ನೀಡುವವರೆಗೆ ವಿದ್ಯಾರ್ಥಿಗಳು ಹಿಜಾಬ್ ಆಗಲೀ ಕೇಸರಿ ಶಾಲಾಗಲೀ ಯಾವುದೇ ವಸ್ತುವನ್ನು ಧರಿಸದೆ ಶಾಲಾ ಕಾಲೇಜುಗಳಿಗೆ ಹೋಗಬೇಕೆಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ , ವಿದ್ಯಾರ್ಥಿಗಳು ಮಧ್ಯಂತರ ಆದೇಶವನ್ನು ಪಾಲಿಸಿ ಧಾರ್ಮಿಕತೆನ್ನು ಬಿಂಬಿಸುವ ಯಾವ ವಸ್ತ್ರವಾಗಲೀ ಅಥವಾ ವಸ್ತುವಾಗಲೀ ಧರಿಸದೆ, ಪ್ರದರ್ಶಿಸಿದೆ ತರಗತಿಗಳನ್ನು ಅಟೆಂಡ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಾವೆಲ್ಲ, ದೇಶವನ್ನು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವ ಜನಗಳಾಗಿದ್ದೇವೆ, ನ್ಯಾಯಾಲಯಗಳು ನೀಡುವ ಆದೇಶವನ್ನು ಪಾಲಿಸುವ, ಅದಕ್ಕೆ ಬದ್ಧರಾಗುವ ಪ್ರವೃತ್ತಿ ನಮ್ಮೆಲ್ಲರಲ್ಲೂ ಇದೆ, ರಾಜ್ಯದಲ್ಲಿ ಹೈಕೋರ್ಟ್ ಆದೇಶಗಳಿಗೆ ವ್ಯತಿರಿಕ್ತವಾಗಿ ಯಾರೂ ನಡೆದುಕೊಂಡ ಉದಾಹರಣೆ ಇಲ್ಲ. ನಾವು ಮುಂದಿನ ವಾರದಿಂದ ಹೈಸ್ಕೂಲುಗಳನ್ನು ಆರಂಭಿಸುತ್ತಿದ್ದೇವೆ ಮತ್ತು ಮಕ್ಕಳು ಕೇವಲ ಸಮವಸ್ತ್ರ ಮಾತ್ರ ಧರಿಸಿ ಶಾಲೆಗಳಿಗೆ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಕಾಲೇಜು ಆರಂಭದ ಬಗ್ಗೆ ಸೋಮವಾರ ಸಾಯಂಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ಕರೆಯಲಿದ್ದು ಆ ಬಳಿಕ ನಿರ್ಧಾರವಾಗಲಿದೆ ಎಂದು ಹೇಳಿದರು.