ಹೊಸದಿಗಂತ ವರದಿ, ಚಿತ್ರದುರ್ಗ:
ವಿದ್ಯಾರ್ಥಿಗಳು ಅನಗತ್ಯ ವಿವಾದಗಳ ಕಡೆ ಗಮನ ನೀಡುವುದನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳಲ್ಲಿ ಯಾವುದೇ ತಾರತಮ್ಯ ಭಾವನೆ, ಬಡವ – ಶ್ರೀಮಂತ, ಮೇಲು – ಕೀಳು ಭಾವನೆ ಉಂಟಾಗಬಾರದೆಂದು ಸಮವಸ್ತ್ರ ನಿಯಮ ಮಾಡಿರುತ್ತಾರೆ. ಅದರಂತೆ ಎಲ್ಲರೂ ಸಮವಸ್ತ್ರ ಧರಿಸಬೇಕು. ಅದನ್ನು ದಿಕ್ಕರಿಸಿ ತಮ್ಮ ಧರ್ಮದ ಬಟ್ಟೆ ಧರಿಸುತ್ತೇನೆ ಎನ್ನುವುದು ಸರಿಯಲ್ಲ ಎಂದರು.
ವಿರೋಧ ಪಕ್ಷದವರು ಹಿಜಾಬ್ ವಿವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡುವುದು ಸರಿಯಾದ ಕ್ರಮವಲ್ಲ. ತಮ್ಮಲ್ಲಿ ಸಾಕಷ್ಟು ಹುಳುಕುಗಳಿದ್ದರೂ ಅವುಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡದ ಡಿ.ಕೆ.ಶಿವಕುಮಾರ್ ಕ್ಷುಲ್ಲಕ ರಾಜಕಾರಣ ಮಾಡುವುದು ಎಷ್ಟರಮಟ್ಟಿಗೆ ಸರಿ. ಕಸದ ಬುಟ್ಟಿಯಲ್ಲಿ ರಾಷ್ಟ್ರಧ್ವಜ ಹಾರಿಸಿದವರು ಈಗ ರಾಷ್ಟ್ರಧ್ವಜದ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಡಿ.ಕೆ.ಶಿ. ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳಿದರು.